ಅತಿಥಿಗಳನ್ನು ಮನೆಗೆ ಹೀಗೆ ಬರಮಾಡಿಕೊಳ್ಳಬೇಕು!

ಮನೆಗೆ ಬಂದ ಅತಿಥಿ ಮತ್ತು ಬಂಧು ಮಿತ್ರರನ್ನು ಹೇಗೆ ಬರಮಾಡಿಕೊಳ್ಳಬೇಕು?

ಅನೇಕ ಬಾರಿ ನಿಮ್ಮ ಮನೆಗೆ ನಿಮ್ಮ ತಂದೆ ತಾಯಿಯ ಪರಿಚಯಸ್ಥರು ಅವರನ್ನು ಭೇಟಿ ಮಾಡಲು ಬರುತ್ತಾರೆ ಅಲ್ಲವೇ? ಹಲವಾರು ಮನೆಗಳಲ್ಲಿ, ಅತಿಥಿಗಳು ಬಂದರೂ ಕೂಡ ಮಕ್ಕಳು ದೂರದರ್ಶನದ ಕಾರ್ಯಕ್ರಮಗಳನ್ನು ವೀಕ್ಷಿಸುವುದರಲ್ಲಿ ಮಗ್ನರಾಗಿರುತ್ತಾರೆ. ಕುಳಿತ ಜಾಗದಿಂದ ಎದ್ದು, ಬಂದವರನ್ನು ಬರಮಾಡಿಕೊಳ್ಳುವುದಿಲ್ಲ. ಸೋಫಾ ಅಥವಾ ಬೇರೆ ಆಸನಗಳ ಮೇಲೆ ಜಾಗ ಇಲ್ಲಿದಿದ್ದರೆ ಅತಿಥಿಗಳು ನಿಂತಲ್ಲೇ ಇರಬೇಕಾಗುತ್ತದೆ, ಮಕ್ಕಳು ತಾವಾಗಿಯೇ ಎದ್ದು ಅತಿಥಿಗಳಿಗೆ ಸ್ಥಳ ಮಾಡಿಕೊಡುವುದಿಲ್ಲ. ದೂರದರ್ಶನದ ಕಾರ್ಯಕ್ರಮದ ಶಬ್ಧದಲ್ಲಿ ಅತಿಥಿಗಳು ಏನು ಮಾತನಾಡುತ್ತಿದ್ದಾರೆ ಎಂದು ಕೇಳಿಸಿಕೊಳ್ಳಲೂ ಕೂಡ ಕಷ್ಟವಾಗುತ್ತದೆ. ಬೇರೆ ಉಪಾಯವಿಲ್ಲದೆ ಪಾಲಕರು ದೂರದರ್ಶನದ ಧ್ವನಿಯನ್ನು ಕಮ್ಮಿ ಮಾಡಲು ಅಥವಾ ದೂರದರ್ಶನವನ್ನು ಮುಚ್ಚಿ ಒಳಗೆ ಹೋಗಲು ಮಕ್ಕಳಿಗೆ ಹೇಳಬೇಕಾಗುತ್ತದೆ. ಅದರೂ ಕೆಲವು ಮಕ್ಕಳು ಉದ್ಧಟತನದಿಂದ ಉತ್ತರಿಸುವುದು ನೋಡಿರಬಹುದು.

ಮನೆಗೆ ಬಂದ ಅತಿಥಿಗಳ ವಿಷಯದಲ್ಲಿ ಯಾವ ಭಾವವನ್ನು ಇಟ್ಟುಕೊಳ್ಳಬೇಕು?

ಸಂಸ್ಕೃತದಲ್ಲಿ ‘ಅತಿಥಿ ದೇವೋ ಭವ |‘ ಎಂಬ ಪ್ರಸಿದ್ಧ ಉಕ್ತಿಯೊಂದಿದೆ. ‘ಅತಿಥಿಗಳು ದೇವರ ರೂಪವಾಗಿದ್ದಾರೆ’ ಎಂಬುದು ಇದರ ಅರ್ಥ.

‘ದೇವರೇ ಸ್ವತಃ ಅತಿಥಿಗಳ ರೂಪದಲ್ಲಿ ನಮ್ಮ ಮನೆಗೆ ಬಂದಿರುತ್ತಾರೆ’ ಎಂಬುದನ್ನು ಹಿಂದೂ ಧರ್ಮದಲ್ಲಿ ಕಲಿಸಲಾಗುತ್ತದೆ. ಧರ್ಮದಲ್ಲಿ ತಿಳಿಸಿದ ಪ್ರಕಾರ, ನಾವು ನಮ್ಮ ಮನೆಗೆ ಬಂದ ಅತಿಥಿಗಳನ್ನು ಆದರದಿಂದ ಬರಮಾಡಿಕೊಂಡು ಸತ್ಕರಿಸಬೇಕು. ಅವರ ಆದರಾತಿಥ್ಯವನ್ನು ಆದಷ್ಟು ಉತ್ತಮ ರೀತಿಯಲ್ಲಿ ಮಾಡಬೇಕು.

ಮನೆಗೆ ಬಂದ ಅತಿಥಿಗಳು ಮತ್ತು ನೆಂಟರ ಸ್ವಾಗತ ಮತ್ತು ಆದರಾತಿಥ್ಯವನ್ನು ಹೇಗೆ ಮಾಡಬೇಕು?

೧. ಅತಿಥಿಗಳು ಮನಗೆ ಬಂದಾಗ ಕೂಡಲೇ ಎದ್ದು ನಮಸ್ಕರಿಸಿ ಅವರನ್ನು ಬರಮಾಡಿಕೊಳ್ಳಬೇಕು.

೨. ಅತಿಥಿಗಳು ನಿಂತೇ ಇದ್ದರೆ ಅವರ ಮುಂದೆ ಕುಳಿತುಕೊಳ್ಳಬಾರದು.

೩. ಅವರಿಗೆ ಕುಳಿತುಕೊಳ್ಳಲು ಆಸನಗಳನ್ನು ಅಥವಾ ಸ್ಥಳವನ್ನು ಮಾಡಿಕೊಳ್ಳಬೇಕು.

೪. ಅತಿಥಿಗಳು ಕುಳಿತುಕೊಂಡ ಮೇಲೆಯೇ ನಾವು ಕುಳಿತುಕೊಳ್ಳಬೇಕು. ಇದರಿಂದ ನಮ್ಮಲ್ಲಿ ವಿನಮ್ರತೆಯ ವೃದ್ಧಿಯಾಗುವುದಲ್ಲದೇ ಅತಿಥಿಗಳ ಬಗ್ಗೆ ಆದರವೂ ವ್ಯಕ್ತಪಡಿಸಿದಂತೆ ಆಗುತ್ತದೆ.

೫. ಅತಿಥಿಗಳು ದಣಿದು ಬಂದಿರುವುದರಿಂದ ಅವರಿಗೆ ಕೂಡಲೇ ಕುಡಿಯಲು ನೀರು ತಂದುಕೊಡಬೇಕು.

೬. ಅವರೊಂದಿಗೆ ಮಾತನಾಡುವಾಗ ಹಸನ್ಮುಖರಾಗಿ ಮತ್ತು ಪ್ರೀತಿಯಿಂದ ಮಾತನಾಡಬೇಕು.

೭. ಅತಿಥಿಗಳಿಗೋಸ್ಕರ ಚಹಾ, ತಂಪು ಪಾನೀಯ ಅಥವಾ ತಿಂಡಿ ತಿನಿಸುಗಳನ್ನು ತರಲು ತಂದೆ ಅಥವಾ ತಾಯಿ ತಿಳಿಸಿದ ಕೂಡಲೇ ತಂದುಕೊಡಬೇಕು.

೮. ಹಿರಿಯರು ಯಾವುದೇ ವಿಷಯದ ಬಗ್ಗೆ ಮಾತನಾಡುತ್ತಿರುವಾಗ ನಾವು ಮಧ್ಯದಲ್ಲಿ ಬೇರೆ ವಿಷಯದ ಬಗ್ಗೆ ಮಾತನಾಡಬಾರದು.

೯. ಅತಿಥಿಗಳು ನಿಮ್ಮ ಮನೆಯಿಂದ ಹೊರಡಲು ಸಿದ್ಧರಾಗುತ್ತಿದರೆ, ನೀವೂ ಕೂಡ ತಕ್ಷಣ ಎದ್ದು ನಿಲ್ಲಬೇಕು.

೧೦. ಅತಿಥಿಗಳನ್ನು ಮನೆಯಿಂದ ಬೀಳ್ಕೊಡುವಾಗ ಅವರೊಂದಿಗೆ ನಾಲ್ಕು ಹೆಜ್ಜೆ ಹೋಗಿ ಮತ್ತೆ ಅವರಿಗೆ ಬೀಳ್ಕೊಡಬೇಕು.

ಇದೇ ರೀತಿ ಅತಿಥಿಗಳಲ್ಲಿ ದೇವರ ರೂಪವನ್ನು ನೋಡಿ ಅವರ ಆದರಾತಿಥ್ಯವನ್ನು ಮಾಡಬೇಕು. ಅತಿಥಿಗಳ ಆದರಾತಿಥ್ಯದಲ್ಲಿ ‘ನಾವು ಮಾಡುವುದೆಲ್ಲ ದೇವರಿಗೆ ತಲುಪುತ್ತಿದೆ’ ಎಂಬ ಭಾವವನ್ನು ಇಟ್ಟುಕೊಳ್ಳಬೇಕು. ಇದರಿಂದ ಅವರಲ್ಲಿರುವ ದೇವತ್ವದ ಲಾಭವು ನಮಗಾಗುತ್ತದೆ.

ಹಿಂದೂ ಧರ್ಮದಲ್ಲಿ ತಿಳಿಸಿರುವಂತೆ ‘ಅತಿಥಿ ದೇವೋ ಭವ |’ ಎಂಬ ಮಾರ್ಗದಲ್ಲಿ ಕ್ರಮಿಸಿ, ಆನಂದವನ್ನು ನಿಮ್ಮದಾಗಿಸಿ!