ಅನ್ಯಾಯಕ್ಕೆ ಪ್ರತೀಕಾರ ಮಾಡುವ ಸಮರ್ಥ ರಾಮದಾಸ ಸ್ವಾಮೀಜಿ !

ಬಾಲಮಿತ್ರರೇ, ಸಂತರ ದಯೆ-ಕರುಣೆಗೆ ಮಿತಿಯಿಲ್ಲ ಎಂದು ನಿಮಗೆಲ್ಲ ತಿಳಿದಿದೆ. ಆದರೆ ಅವರು ಅನ್ಯಾಯದ ವಿರುದ್ಧ ಪ್ರತೀಕಾರ ಸಹ ಮಾಡುತ್ತಾರೆ ಮತ್ತು ಅನ್ಯಾಯ ಮಾಡುವವರಿಗೆ ಶಿಕ್ಷೆಯನ್ನೂ ವಿಧಿಸುತ್ತಾರೆ ಎಂದು ಈ ಕಥೆಯಿಂದ ನಮಗೆ ಕಲಿಯಲು ಸಿಗಲಿದೆ.

ಬಾಲಮಿತ್ರರೇ, ಸಮರ್ಥ ರಾಮದಾಸ ಸ್ವಾಮಿ ಒಬ್ಬ ಶ್ರೇಷ್ಠ ಸಂತರು ಮತ್ತು ಶಿವಾಜಿ ಮಹಾರಾಜರ ಗುರುಗಳೂ ಆಗಿದ್ದರು. ಸಮರ್ಥ ರಾಮದಾಸ ಸ್ವಾಮಿಯವರ ಶಿಷ್ಯರು ಪ್ರಚಾರಕ್ಕಾಗಿ ಎಲ್ಲೆಡೆ ಪ್ರಯಾಣಿಸುತ್ತಿದ್ದರು. ಇದು ಶಿವಾಜಿ ಮಹಾರಾಜರು ಉದಯಕ್ಕೆ (ಪ್ರವರ್ಧಮಾನಕ್ಕೆ) ಬರುತ್ತಿದ್ದಂತಹ ಕಾಲವಾಗಿತ್ತು. ಹಿಂಸಾಚಾರಿ ಮೊಘಲರು ಭಾರತದ ವಿವಿಧ ಸ್ಥಳಗಳಲ್ಲಿ ಜನರನ್ನು ಪೀಡಿಸುತ್ತಿದ್ದರು.  ಮಹಾರಾಷ್ಟ್ರದ ಸತಾರಾ ಪ್ರದೇಶವು ವಿಜಾಪುರದ ಆದಿಲಶಾಹ ನ ನಿಯಂತ್ರಣದಲ್ಲಿತ್ತು. ಅವನ ಮೊಘಲ್ ಠಾಣೇದಾರನೊಬ್ಬನು ಸಂಗಮ ಮಾಹುಲಿ ಎಂಬ ಊರಿನಲ್ಲಿ ವಾಸಿಸುತ್ತಿದ್ದನು. ಈ ಠಾಣೇದಾರನು ಕ್ರೂರ ಅತ್ಯಾಚಾರಿಯಾಗಿದ್ದನು. ಅವನು ಯಾವಾಗಲೂ ಸಜ್ಜನ ಬ್ರಾಹ್ಮಣರು, ಸಾಧುಗಳು, ಸನ್ಯಾಸಿಗಳು, ತಪಸ್ವಿಗಳನ್ನು ಹಿಂಸಿಸುತ್ತಿದ್ದನು. ಅವನು ಬ್ರಾಹ್ಮಣರ ಸ್ನಾನ-ಸಂಧ್ಯಾ, ಯಜ್ಞ ಮತ್ತು ಯಾಗಗಳನ್ನು ನಿಲ್ಲಿಸಿ ಬಿಟ್ಟಿದ್ದನು. ಪುರಾಣ-ಓದುವುದು ಮತ್ತು ಕೀರ್ತನೆ ಮಾಡುವುದನ್ನು ಸಹ ನಿಲ್ಲಿಸಿದ್ದನು.

ಅದೇ ಸಮಯದಲ್ಲಿ ಶ್ರೀ ಸಮರ್ಥ ರಾಮದಾಸ ಸ್ವಾಮಿಯವರ ಶಿಷ್ಯ ಉದ್ಧವ ಸ್ವಾಮಿ ಮಾಹುಲಿಯಲ್ಲಿ ನೆಲೆಸಿದ್ದರು. ಅವರು ತಮ್ಮ ಭಕ್ತರೊಂದಿಗೆ ಸ್ನಾನ, ಸಂಧ್ಯಾ, ಪೂಜೆಯನ್ನು ಪ್ರಾರಂಭಿಸಿದರು. ಕೃಷ್ಣ ನದಿಯ ಘಟ್ಟಗಳಲ್ಲಿ ಪ್ರವಚನವನ್ನು ಪ್ರಾರಂಭಿಸಲಾಯಿತು. ಈ ವಿಷಯವನ್ನು ತಿಳಿದ ಠಾಣೇದಾರನು, ತಕ್ಷಣವೇ ಕೃಷ್ಣಾ ನದಿಯ ಘಟ್ಟಕ್ಕೆ ತಲುಪಿ ಉದ್ಧವ ಸ್ವಾಮಿಜಿಯನ್ನು ಹಿಡಿದು ಅವರನ್ನು ಥಳಿಸಿ ಉದ್ಧವ ಸ್ವಾಮಿಜಿ ಮತ್ತು ಅವರ ನಾಲ್ಕು ಶಿಷ್ಯರನ್ನು ಬಂಧಿಸಿ ಕತ್ತಲ ಕೋಣೆಯಲ್ಲಿ ಕೂಡಿಹಾಕಿದನು. ಎಲ್ಲ ಜನರು ಭಯಭೀತರಾಗಿ ಓಡಲು ಪ್ರಾರಂಭಿಸಿದರು. ಸಮರ್ಥ ರಾಮದಾಸ ಸ್ವಾಮೀಜಿಯವರ ಒಬ್ಬ ಶಿಷ್ಯನು ಅವಕಾಶ ಸಿಕ್ಕಿದ ತಕ್ಷಣ ಓಡಿಹೋದನು.

ಆ ಸಮಯದಲ್ಲಿ ಶ್ರೀ ಸಮರ್ಥರು ಚಾಫಳ ಎಂಬ ಗ್ರಾಮದಲ್ಲಿದ್ದರು. ಆ ಶಿಷ್ಯನು ಓಡಿಹೋಗಿ ಮರುದಿನ ಬೆಳಗ್ಗೆ ಚಾಫಳ ತಲುಪಿದನು. ನಡೆದ ಘಟನೆಯನ್ನು ಶ್ರೀ ಸಮರ್ಥ ರಾಮದಾಸಸ್ವಾಮಿಜಿಯವರಿಗೆ ತಿಳಿಸಿದನು. ಸಮರ್ಥರು ಕೋಪದಿಂದ ಕೆಂಡಾಮಂಡಲವಾದರು. ಅವರು ತಮ್ಮ ಎರಡನೆಯ ಶಿಷ್ಯ ಕಲ್ಯಾಣಸ್ವಾಮಿಗೆ ಬೆತ್ತವನ್ನು ತರಲು ಆದೇಶಿಸಿ ಪೀಠದಿಂದ ಎದ್ದರು ಮತ್ತು ನೇರವಾಗಿ ಮಾಹುಲಿಯತ್ತ ಪ್ರಯಾಣ ಬೆಳೆಸಿದರು. ಸಮರ್ಥರು ಏನನ್ನೂ ತಿನ್ನದೇ ಕುಡಿಯದೆ ಹೊರಟಿದ್ದರು.

ಸೂರ್ಯಾಸ್ತದ ಒಂದು ಗಂಟೆ ಮೊದಲು ಅವರು ಮಾಹುಲಿಯನ್ನು ತಲುಪಿ ನೇರವಾಗಿ ಠಾಣೆದಾರನ ಮನೆ ಪ್ರವೇಶಿಸಿದರು. ಆ ಸಮಯದಲ್ಲಿ ಠಾಣೆದಾರನು ಹುಕ್ಕಾ ಸೇದುತ್ತಾ ಕುಳಿತಿದ್ದನು. ಅವರು ಠಾಣೇದಾರನ ಕುತ್ತಿಗೆಯನ್ನು ಹಿಡಿದು ಅವನನ್ನು ಎಳೆದು ಅರ್ಧ ಜೀವವಾಗುವ ತನಕ ತಮ್ಮ ಕೈಯಲ್ಲಿದ್ದ ಬೆತ್ತದಿಂದ ಹೊಡೆದರು. ಸಮರ್ಥರು ಅವನನ್ನು ಎಳೆದುಕೊಂಡು ರಸ್ತೆಗೆ ಕರೆತಂದರು. ಠಾಣೇದಾರನ ಚೀರಾಟವು ವಾತಾವರಣದಲ್ಲಿ ಪ್ರತಿಧ್ವನಿಸುತ್ತಿತ್ತು. ಠಾಣೆದಾರನ ಸೇವಕರೋ, ಒಂದೇ ಒಂದು ಶಬ್ದ ಬಾಯಿಂದ ಹೊರ ತೆಗೆಯದೆ ನಿಂತಿದ್ದರು. ಸಮರ್ಥ ಸ್ವಾಮೀಜಿಯವರ ಉಗ್ರನರಸಿಂಹನ ಕೋಪದ ರೂಪವನ್ನು ನೋಡಿ ಎಲ್ಲರೂ ಗಾಬರಿಗೊಂಡರು. ಠಾಣೆದಾರನನ್ನು ಬಿಡಿಸುವ ಧೈರ್ಯ ಯಾರಲ್ಲಿಯೂ ಇರಲಿಲ್ಲ.

ಠಾಣೇದಾರನ ದೇಹದಿಂದ ರಕ್ತ ಹರಿಯುತ್ತಿತ್ತು. ಅವನು ಕರುಣೆಗಾಗಿ ಬೇಡಿಕೊಳ್ಳುತ್ತ ಸಮರ್ಥ ಮಹಾರಾಜರ ಚರಣಗಳಲ್ಲಿ ಎರಗಿದನು. ಕತ್ತಲು ಕೋಣೆಯಲಿರುವವರನ್ನು ಮೊದಲು ಬಿಡುಗಡೆ ಮಾಡು ಎಂದು ಶ್ರೀ ಸಮರ್ಥ ಮಹಾರಾಜರು ಗರ್ಜಿಸಿದರು. ಠಾಣೆದಾರನು ಜೀವ ಉಳಿಸಲು ತನ್ನ ಸೇವಕರಿಗೆ ಆದೇಶಿಸಿದನು. ಕತ್ತಲು ಕೋಣೆಯನ್ನು ತೆರೆಯಲಾಯಿತು. ಉದ್ಧವಸ್ವಾಮಿ ಮತ್ತು ಅವರ ಭಕ್ತರು ಸಮರ್ಥರ ಚರಣಗಳಲ್ಲಿ ಬಿದ್ದರು. ಠಾಣೆದಾರನು ಶ್ರೀ ಸಮರ್ಥ ಮಹಾರಾಜರಿಂದ ಬಹಳ ಪ್ರಭಾವಿತನಾದನು. ಅವನು ಸಮರ್ಥ ಮಹಾರಾಜರ ಚರಣಗಳನ್ನು ಹಿಡಿದು ಕ್ಷಮೆಯಾಚಿಸಿದನು ಮತ್ತು ಭವಿಷ್ಯದಲ್ಲಿ ಯಾರನ್ನೂ ಹಿಂಸಿಸುವುದಿಲ್ಲ, ಭಜನೆ-ಕೀರ್ತನೆ ಮತ್ತು ಪುರಾಣ ಓದುವುದನ್ನು ನಿಲ್ಲಿಸುವುದಿಲ್ಲ ಮತ್ತು ಯಾರಿಗೂ ಅನ್ಯಾಯ ಮಾಡುವುದಿಲ್ಲ , ಎಂದು ಆಣೆ ಮಾಡಿದನು.

ಅನಂತರ, ದಯಾಮಯ ಅಂತಃಕರಣದಿಂದ ಶ್ರೀ ಸಮರ್ಥ ರಾಮದಾಸ್ವಾಮಿಯವರು ಅವನನ್ನು ಕ್ಷಮಿಸಿದರು ಮತ್ತು ಅವನ ಗಾಯಗಳಿಗೆ ಔಷಧಿ ಗಿಡಮೂಲಿಕೆಗಳ ಲೇಪ ಹಚ್ಚಿಸಿ ಚಿಕಿತ್ಸೆ ನೀಡಿದರು. ಶ್ರೀ ಸಮರ್ಥ ಮಹಾರಾಜರು ದಿನವಿಡಿ ಏನನ್ನೂ ತಿನ್ನಲಿಲ್ಲ ಎಂದು ಗ್ರಾಮಸ್ಥರಿಗೆ ತಿಳಿದಾಗ, ಗ್ರಾಮದ ಜನರು ಸಮರ್ಥ ರಾಮದಾಸ್ವಾಮಿ ಮತ್ತು ಉದ್ಧವಸ್ವಾಮಿ ಮತ್ತು ಇತರ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಸಹ ಮಾಡಿದರು.

ಆ ರಾತ್ರಿ ಶ್ರೀ ಸಮರ್ಥ ಸ್ವಾಮೀಜಿಯವರು ಮಾಹುಲಿಯ ಘಟ್ಟದಲ್ಲಿ ವಿವಿಧ ದೃಷ್ಟಾಂತ ಹಾಗೂ ಉದಾಹರಣೆಗಳೊಂದಿಗೆ ಪ್ರವಚನವನ್ನು ನೀಡಿದರು. ಈ ಪ್ರವಚನವನ್ನು ಕೇಳಿದ ಮಾಹುಲಿಯ ಜನರು ತೃಪ್ತರಾದರು.

ಬಾಲಮಿತ್ರರೇ, ಈ ಉದಾಹರಣೆಯಿಂದ ದಯಾಳುಗಳಾಗಿರುವ ಸಂತರು ಸಹ ದಬ್ಬಾಳಿಕೆಯನ್ನು ವಿರೋಧಿಸುತ್ತಾರೆ, ಮೂಕ ಪ್ರೇಕ್ಷಕರಾಗಿ ಸುಮ್ಮನಿರುವುದಿಲ್ಲ. ಯಾವ ರೀತಿ ಅನ್ಯಾಯ ಮಾಡುವುದು ಪಾಪವೋ ಅದೇರೀತಿ ಅನ್ಯಾಯವನ್ನು ಸಹಿಸುವುದೂ ಪಾಪವಾಗಿದೆ ಎಂದು ತಿಳಿಯುತ್ತದೆ. ಇದರಿಂದ ಪಾಠ ಕಲಿತು, ನಾವು ಕೂಡ ಜಾಗೃತರಾಗಿ ಸಂವಿಧಾನಿಕ ಮಾರ್ಗದ (ಕಾನೂನುರೀತ್ಯಾ) ಮೂಲಕ ದೌರ್ಜನ್ಯವನ್ನು ಎದುರಿಸಬೇಕು.

Leave a Comment