ತೀವ್ರ ತಳಮಳದಿಂದ ಭಗವಂತನೂ ಸಿಗುತ್ತಾನೆ !

ಮಕ್ಕಳೇ, ಪರಮೇಶ್ವರನ ಪ್ರಾಪ್ತಿಗಾಗಿ ನಮ್ಮಲ್ಲಿ ತೀವ್ರ ತಳಮಳವಿರುವುದು ಆವಶ್ಯಕವಾಗಿದೆ. ಕೇವಲ ತಳಮಳದಿಂದಲೇ ಈಶ್ವರಪ್ರಾಪ್ತಿಯು ಸಾಧ್ಯವಾಗುತ್ತದೆ. ಬನ್ನಿ, ಪರಮ ಪೂಜನೀಯ ಸಂತ ರಾಮಕೃಷ್ಣ ಪರಮಹಂಸರ ಜೀವನದ ಮೂಲಕ ತೀವ್ರ ತಳಮಳದ ಒಂದು ಉದಾಹರಣೆಯನ್ನು ನೋಡೋಣ.

ರಾಮಕೃಷ್ಣ ಪರಮಹಂಸರ ತಂದೆ-ತಾಯಿ ತುಂಬಾ ಬಡವರಾಗಿದ್ದರು. ಆದರೂ ಯಾರಾದರೂ ಹಸಿದ ವ್ಯಕ್ತಿಯು ಅವರ ಬಾಗಿಲಿಗೆ ಬಂದರೆ ಅವರು ತಮ್ಮ ಮನೆಯಲ್ಲಿರುವ ಅಲ್ಪ-ಸ್ವಲ್ಪ ಅನ್ನವನ್ನು ಆ ಹಸಿದ ವ್ಯಕ್ತಿಗೆ ಕೊಟ್ಟು ಸ್ವತಃ ಇಡೀ ದಿನ ಬರಿಹೊಟ್ಟೆಯಲ್ಲಿ ಕಳೆಯುತ್ತಿದ್ದರು. ಇಂತಹ ಪರೋಪಕಾರಿ ತಂದೆ-ತಾಯಿಯ ಮನೆಯಲ್ಲಿ ರಾಮಕೃಷರು ೧೮ ಫೆಬ್ರುವರಿ ೧೮೩೬ರಂದು ಜನಿಸಿರು. ಇವರ ಬಾಲ್ಯದ ಹೆಸರು ಗದಾಧರ. ಗದಾಧರನು ೭ ವರ್ಷದವನಿದ್ದಾಗ ತಂದೆಯ ಮೃತ್ಯುವಾಯಿತು. ಇಂತಹ ಸಮಯದಲ್ಲಿ ಕುಟುಂಬದ ಪಾಲನೆ-ಪೋಷಣೆಯು ಕಠಿಣವಾಯಿತು. ಆದುದರಿಂದ ಅವರಿಗೆ ತಮ್ಮ ಹೊಟ್ಟೆ ತುಂಬಿಸುವ ಮಾರ್ಗವನ್ನು ಸ್ವತಃ ಹುಡುಕಬೇಕಾಯಿತು.

ಕೋಲ್ಕತ್ತಾದ ಬಳಿ ದಕ್ಷಿಣೇಶ್ವರ ಎಂಬ ಊರಿದೆ. ಅಲ್ಲಿ ಮಹಾಕಾಳಿ ಮಾತೆಯ ಒಂದು ಮಂದಿರವಿದೆ. ರಾಮಕೃಷ್ಣ ಪರಮಹಂಸರು ಮನಸ್ಸಿನಿಂದ ಅತ್ಯಂತ ನಿಶ್ಚಲ, ಸಹಜ ಹಾಗೂ ವಿನಯಶೀಲರಾಗಿದ್ದರು. ಅವರು ಆ ಮಂದಿರದಲ್ಲಿ ಸೇವೆ-ಪೂಜೆಯನ್ನು ಮಾಡತೊಡಗಿದರು. ನಂತರ ಅಲ್ಲಿಯೇ ಪೂಜಾರಿಯಾಗಿ ನೇಮಕರಾದರು. ಅವರು ಪ್ರತಿದಿನ ದೇವಿ ಮಹಾಕಾಳಿಯ ಪೂಜೆಯನ್ನು ಮಾಡುತ್ತಿದ್ದರು ಹಾಗೂ ಮಾತೆಯೊಂದಿಗೆ ಮಾತನಾಡುತ್ತಿದ್ದರು. ಅವರು ದೇವಿಯೊಂದಿಗೆ ಮಾತನಾಡಲು ಉತ್ಸುಕರಾಗಿರುತ್ತಿದ್ದರು. ಅವರಿಗೆ ನಿಜವಾಗಿಯೂ ಮೂರ್ತಿಯಲ್ಲಿ ದೇವಿಯು ಇದ್ದಾಳೆಯೇ ಎಂಬುದನ್ನು ತಿಳಿಯುವ ಉತ್ಸುಕತೆ ಇರುತ್ತಿತ್ತು. ಅವರು ದಿನ-ರಾತ್ರಿ ದೇವಿಯ ನಾಮಜಪ ಮಾಡತೊಡಗಿದರು. ‘ನನಗೆ ಸಾಕ್ಷಾತ್ ಪರಮೇಶ್ವರಿಯ ದರ್ಶನವಾಗಲು ನಾನು ಇನ್ನೇನು ಮಾಡಬೇಕು’ ಎಂಬುದೇ ಅವರ ವಿಚಾರವಾಗಿತ್ತು.

ಅವರು ದಿನ-ರಾತ್ರಿ ಮಾತೆಯ ದರ್ಶನಕ್ಕಾಗಿ ವ್ಯಾಕುಲರಾಗಿ ಅಳುತ್ತಿದ್ದರು. ಅವರು ‘ಅಮ್ಮ ನೀವು ನಿಜವಾಗಿಯೂ ಇದ್ದೀರಲ್ಲವೇ ? ಭಗವಂತನ ದರ್ಶನ ಸಿಗುತ್ತದೆಯೇ ? ಸಿಗಬಹುದಾದರೆ ಅದು ಹೇಗೆ ?’ ಈ ವಿಚಾರಗಳ ಹೊರತು ಅವರಿಗೆ ಬೇರೆ ಏನೂ ತಿಳಿಯುತ್ತಿರಲಿಲ್ಲ. ಆದುದರಿಂದ ಪ್ರತಿದಿನ ಪೂಜೆ ಮಾಡುವುದು, ವಿಧಿ ಹಾಗೂ ಆಚಾರ ನಿಯಮಗಳ ಪಾಲನೆ ಮಾಡುವುದು ಅವರಿಗೆ ನಿಧಾನವಾಗಿ ಕಠಿಣವಾಗತೊಡಗಿತು. ದೇವಿಯ ದರ್ಶನಕ್ಕಾಗಿ ವ್ಯಾಕುಲರಾಗಿ ಕೆಲವೊಮ್ಮೆ ಅವರು ತಮ್ಮ ಮೂಗನ್ನು ನೆಲಕ್ಕೆ ಉಜ್ಜುತ್ತಿದ್ದರು, ಕೆಲವೊಮ್ಮೆ ಅಳುತ್ತ ‘ದೇವಿ, ನನ್ನ ಮೇಲೆ ಕೃಪೆ ಮಾಡು, ನನ್ನ ಹೃದಯದಲ್ಲಿ ನಿಮ್ಮ ಹೊರತು ಬೇರೆ ಯಾವುದೇ ವಸ್ತುವನ್ನು ಪಡೆಯುವ ಇಚ್ಛೆಯು ಇರದಿರಲಿ, ನನ್ನನ್ನು ಹಾಗೆ ಪರಿವರ್ತಿಸು’ ಎಂದು ಯಾಚನೆ ಮಾಡುತ್ತಿದ್ದರು. ದೇವಿಗಾಗಿ ಸರ್ವಸ್ವವನ್ನು ತ್ಯಾಗ ಮಾಡದ ಹೊರತು ಎಂದಿಗೂ ದೇವಿಯು ದರ್ಶನ ನೀಡುವುದಿಲ್ಲ ಎಂಬುದನ್ನು ಅವರು ಎಲ್ಲಿಂದಲೋ ಕೇಳಿದರು. ಇದರಿಂದ ಅವರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಲು ನಿಶ್ಚಯಿಸಿದರು. ಅವರ ಬಳಿ ಇರುವ ಹಣವನ್ನು ತ್ಯಾಗ ಮಾಡಿದರು ಹಾಗೂ ಇನ್ನು ಮುಂದೆ ಹಣವನ್ನು ಎಂದಿಗೂ ಮುಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಅವರು ಕೇವಲ ಪ್ರತಿಜ್ಞೆ ಮಾಡದೇ ಅದರಂತೆ ಆಚರಣೆ ಮಾಡಲು ಆರಂಭಿಸಿದರು. ಅವರ ಹುಚ್ಚರಂತಾದ ಅವಸ್ಥೆಯನ್ನು ನೋಡಿ ಎಲ್ಲರೂ ಆ ಬಾಲಕನನ್ನು ಹುಚ್ಚನೆಂದು ತಿಳಿದರು.

ಹೀಗೆ ಸತ್ಯವನ್ನು ಹುಡುಕಲು ಅವರು ಅನೇಕ ತಿಂಗಳುಗಳ ವರೆಗೆ ಹಗಲೂ-ರಾತ್ರಿ ಪ್ರಯತ್ನಿಸತೊಡಗಿದರು. ಅವರ ನಿರಂತರ ಪ್ರಯತ್ನಗಳಿಂದ ದೇವಿಯು ಅವರ ಮೇಲೆ ಪ್ರಸನ್ನಳಾದಳು. ಅವರಿಗೆ ಅನೇಕ ರೀತಿಯಲ್ಲಿ ದೇವರ ದರ್ಶನವಾಯಿತು. ಅವರಿಗೆ ಪರಮೇಶ್ವರನ ಅದ್ಭುತ ಸ್ವರೂಪದಲ್ಲಿ ದರ್ಶನ ಸಿಗಲು ಆರಂಭವಾಯಿತು. ಅವರಿಗೆ ನಿಧಾನವಾಗಿ ತಮ್ಮ ವಾಸ್ತವ ಸ್ವರೂಪದ ರಹಸ್ಯವು ತಿಳಿಯಲಾರಂಭಿಸಿತು. ಜಗನ್ಮಾತೆ ಅಂದರೆ ದೇವಿಯು ಸ್ವತಃ ಗುರುವಾಗಿ ಅವರಿಗೆ ಸಾಧನೆಯ ಪಾಠವನ್ನು ಕಲಿಸಿದರು.

ಮಕ್ಕಳೇ, ಈ ಕಥೆಯಿಂದ ನಾವು ನಮಗೆ ಜೀವನದಲ್ಲಿ ಏನೇ ಮಾಡಬೇಕಾಗಿದ್ದರೂ ಅದಕ್ಕಾಗಿ ನಮ್ಮಲ್ಲಿ ತೀವ್ರ ತಳಮಳವಿರುವುದು ಆವಶ್ಯಕವಾಗಿದೆ ಎಂದು ತಿಳಿಯುತ್ತದೆ. ರಾಮಕೃಷ್ಣ ಪರಮಹಂಸರಲ್ಲಿದ್ದ ತೀವ್ರ ತಳಮಳದಿಂದ ಸಾಕ್ಷಾತ ದೇವರೇ ಅವರಿಗೆ ಗುರುವಾಗಿ ಲಭಿಸಿದರು.

Leave a Comment