ಶ್ರೀ ಗಣೇಶದಾಸ

ಇದು ಬಹಳ ಹಿಂದಿನ ಕಾಲದ ವಿಷಯ. ಕಾಶೀ ಕ್ಷೇತ್ರದಲ್ಲಿ ಓರ್ವ ಸತ್ಪುರುಷರಿದ್ದರು. ಅವರು ಪುರಾಣ ಹಾಗೂ ಉಪನಿಷತ್ತುಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದರು. ಅವರು ಹೆಸರು ‘ಗಣೇಶದಾಸ’ ಎಂದು ಇತ್ತು. ಗಣೇಶದಾಸರು ಭಗವಾನ್ ಗಣೇಶನ ಮಹಾನ ಭಕ್ತರಾಗಿದ್ದರು. ಶ್ರೀ ಗಣೇಶದಾಸರು ‘ಗಣೇಶಕಥೆಯನ್ನು ಬ್ರಹ್ಮಾಂಡವನ್ನು ಭೇದಿಸಿ ಅದರಾಚೆಗೆ ಕೊಂಡೊಯ್ಯುವೆನು’ ಎಂದು ಪ್ರತಿಜ್ಞೆ ಮಾಡಿದ್ದರು. ಗಣೇಶದಾಸರಿಗೆ ಚರಾಚರದಲ್ಲಿ ಶ್ರೀ ಗಣೇಶನ ದರ್ಶನವಾಗುತ್ತಿತ್ತು. ಅವರಿಗೆ ಎಲ್ಲೆಡೆಯೂ ಶ್ರೀ ಗಣೇಶನೇ ಕಾಣಿಸುತ್ತಿದ್ದನು. ಆದ್ದರಿಂದ ಜನರು ಅವರನ್ನು ಗಣೇಶದಾಸರೆಂದು ಕರೆಯುತ್ತಿದ್ದರು. ಅವರು ಅತ್ಯಂತ ಸತ್ಪಾತ್ರರಾಗಿದ್ದರು. ಅಂತರ್ಬಾಹ್ಯವಾಗಿ ಪರಿಶುದ್ಧರಾಗಿದ್ದರು. ಅವರು ಯಾವುದೇ ವಿಷಯದಲ್ಲಿ ಮೋಹವಿಲ್ಲದ ಮಹಾತ್ಮರಾಗಿದ್ದರು.

ಒಮ್ಮೆ ಗಣೇಶದಾಸರು ಕಾಶಿಯಲ್ಲಿ ಸುತ್ತಾಡಿ ಬರಲು ಹೊರಟರು. ಸಾಯಂಕಾಲ ಕಳೆದಿತ್ತು. ರಾತ್ರಿಯಾಗುತ್ತಿತ್ತು. ಗಣೇಶದಾಸರಂತೂ ಮಹಾನ್ ಭಕ್ತರಾಗಿದ್ದರು, ಅವರಿಗೆ ಯಾವ ರೀತಿಯ ಭಯ? ಗಣೇಶದಾಸರು ವಾರಾಣಸಿಯಲ್ಲಿನ ಮಣಿಕರ್ಣಿಕಾ ಘಟ್ಟದಲ್ಲಿ ಸುತ್ತಾಡುತ್ತಿದ್ದರು, ಆಗ ಕೆಲವು ಕಳ್ಳರು ಅಲ್ಲಿಗೆ ಬಂದರು. ಅವರು ಗಣೇಶದಾಸರನ್ನು ‘ನೀವು ಯಾರು?’ ಎಂದು ಕೇಳಿದರು . ಗಣೇಶದಾಸರು ನಕ್ಕರು. ಅವರು ಗಣೇಶನ ಅನುಸಂಧಾನದಲ್ಲಿ ತಲ್ಲೀನರಾಗಿದ್ದರು. ಅವರಿಗೆ ನಾಲ್ಕು ಕಡೆಯಲ್ಲಿಯೂ ಭಗವಾನ್ ಗಣೇಶನೇ ಕಾಣಿಸುತ್ತಿದ್ದನು. ಅವರಿಗೆ ಕಳ್ಳರಲ್ಲಿಯೂ ಭಗವಾನ್ ಶ್ರೀ ಗಣೇಶನೇ ಕಂಡು ಬಂದನು. ಅವರು ನಗುತ್ತಾ ‘ನೀವು ಯಾರಾಗಿರುವಿಯೋ ನಾನು ಕೂಡ ಅವನೇ ಆಗಿರುವೆ’ ಎಂದು ಹೇಳಿದರು. ಅದನ್ನು ಕೇಳಿ ಕಳ್ಳರಿಗೆ ಗಣೇಶದಾಸರು ಕೂಡ ಅವರ ಹಾಗೆ ಕಳ್ಳರೇ ಆಗಿದ್ದಾರೆ ಎಂದು ಅನಿಸಿತು. ಆಗ ಕಳ್ಳರು ‘ಒಳ್ಳೆಯದಾಯಿತು ಕಳ್ಳತನ ಮಾಡಲು ಹೊರಟಿದ್ದೇವೆ, ಇವನನ್ನು ಕೂಡ ನಮ್ಮೊಂದಿಗೆ ಕರೆದುಕೊಂಡು ಹೋಗೋಣ’ ಎಂದು ಯೋಚಿಸಿದರು, ಅದರಂತೆ ಅವರು ಗಣೇಶದಾಸರನ್ನು ತಮ್ಮೊಡನೆ ಕರೆದುಕೊಂಡು ಹೋದರು. ಕಳ್ಳರು ಒಂದು ದೊಡ್ಡ ಮನೆಯನ್ನು ದೋಚಲು ಯೋಜನೆ ರೂಪಿಸಿದ್ದರು. ಅವರು ‘ಗಣೇಶದಾಸರು ಸ್ವಲ್ಪ ಹೊಸಬರಾಗಿದ್ದಾರೆ, ಅವರನ್ನು ಒಳಗೆ ಕರೆದುಕೊಂಡು ಹೋಗುವುದು ಬೇಡ, ಹೊರಗೆ ನಿಲ್ಲಿಸೋಣ’ ಎಂದು ಯೋಚಿಸಿದರು. ಗಣೇಶದಾಸರ ಹೆಗಲ ಮೇಲೆ ಒಂದು ಜೋಳಿಗೆಯಿತ್ತು. ಕಳ್ಳರು ಅದರಲ್ಲಿ ಚಿನ್ನ ತುಂಬಿಸಿಕೊಳ್ಳಬಹುದೆಂದು ಯೋಚಿಸಿದರು. ಆದ್ದರಿಂದ ಆ ಕಳ್ಳರು ಗಣೇಶದಾಸರನ್ನು ಆ ದೊಡ್ಡ ಮನೆಯ ಹೊರಗೆ ನಿಲ್ಲಿಸಿದರು. ಮತ್ತು ಒಳಗೆ ಹೋಗುವಾಗ ಒಬ್ಬ ಕಳ್ಳನು ಗಣೇಶದಾಸರಿಗೆ ‘ನಾವು ಒಳಗೆ ದರೋಡೆ ಮಾಡಲು ಹೋಗುತ್ತಿದ್ದೇವೆ, ಒಂದು ವೇಳೆ ನಿನಗೆ ಯಾರಾದರೂ ಬರುವ ಸುಳಿವು ಸಿಕ್ಕಿದರೆ, ನಮ್ಮನ್ನು ಎಚ್ಚರಿಸು’ ಎಂದು ಹೇಳಿದನು. ಗಣೇಶದಾಸರಂತೂ ತಮ್ಮ ಭಕ್ತಿ ಹಾಗೂ ಅನುಸಂಧಾನದಲ್ಲಿ ಲೀನರಾಗಿದ್ದರು. ಅವರು ಸರಿ ಎಂದು ತಲೆ ಅಲ್ಲಾಡಿಸಿದರು. ಆ ಕಳ್ಳರೆಲ್ಲರೂ ಮನೆಯೊಳಗೆ ನುಗ್ಗಿದರು. ಇತ್ತ ಗಣೇಶದಾಸರ ಚಿತ್ತದಲ್ಲಿ ನಾಲ್ಕೂ ದಿಕ್ಕುಗಳಿಂದಲೂ ಗಣೇಶನ ಪ್ರಕಾಶ ಆವರಿಸಿತ್ತು ಹಾಗೂ ಶ್ರೀ ಗಣೇಶನ ಸುಂದರ ರೂಪವನ್ನು ನೋಡುವುದರಲ್ಲಿ ತಲ್ಲೀನರಾಗಿದ್ದರು.

ಇದ್ದಕ್ಕಿದ್ದಂತೆ ಗಣೇಶದಾಸರಿಗೆ ಕಳ್ಳರ ಮಾತು ನೆನಪಾಯಿತು, ಕಳ್ಳರು ಯಾರಾದರೂ ಬರುವ ಸುಳಿವು ಸಿಕ್ಕಿದರೆ, ನಮ್ಮನ್ನು ಎಚ್ಚರಿಸು ಎಂದು ಹೇಳಿದ್ದರು. ಅವರ ಜೋಳಿಗೆಯಲ್ಲಿ ಶಂಖವಿತ್ತು. ಗಣೇಶದಾಸರಿಗಂತೂ ನಾಲ್ಕೂ ಕಡೆಯಲ್ಲಿಯೂ ಭಗವಾನ್ ಶ್ರೀ ಗಣೇಶನೇ ಕಾಣಿಸುತ್ತಿದ್ದನು. ಅವರು ತಮ್ಮ ಶಂಖವನ್ನು ಹೊರಗೆ ತೆಗೆದು ಅದನ್ನು ಊದಲು ಪ್ರಾರಂಭಿಸಿದರು. ಶಂಖದ ಶಬ್ಧವನ್ನು ಕೇಳಿ ಆ ಮನೆಯ ಸದಸ್ಯರೆಲ್ಲರೂ ಎಚ್ಚರಗೊಂಡರು. ಮನೆಯವರೆಲ್ಲರೂ ಎದ್ದರಿರುವುದನ್ನು ಕಂಡು ಆ ಕಳ್ಳರು ಹೆದರಿ ಹೊರಗೆ ಓಡಿ ಬಂದರು. ಅವರೆಲ್ಲರೂ ಗಣೇಶದಾಸರನ್ನೂ ತಮ್ಮೊಂದಿಗೆ ಕರೆದುಕೊಂಡು ಓಡಿ ಹೋದರು. ಸ್ವಲ್ಪ ದೂರ ಬಂದ ಬಳಿಕ ಕಳ್ಳರು ಶ್ರೀ ಗಣೇಶದಾಸರಿಗೆ, ‘ಅರೆ ನಿನಗೇನಾದರೂ ಹುಚ್ಚ ಹಿಡಿದಿದೆಯಾ! ನಾವು ನಿನ್ನನ್ನು ನಮ್ಮಂತೆ ಕಳ್ಳನೆಂದು ತಿಳಿದು ನಮ್ಮ ಜೊತೆಯಲ್ಲಿ ಸೇರಿಸಿಕೊಂಡಿದ್ದೆವು. ಆದರೆ ನೀನೇನು ಮಾಡಿದೆ ! ನಾವು ಏನಾದರೂ ಕದಿಯುವ ಮೊದಲೇ, ನೀನೇಕೆ ಶಂಖವನ್ನು ಊದಿದೆ?’ ಎಂದು ಗದರಿಸಿದರು. ಅದಕ್ಕೆ ಗಣೇಶದಾಸರು ‘ನೀವು ನನಗೇನು ಹೇಳಿದ್ದಿರಿ? ಯಾರಾದರೂ ಬರುವ ಸುಳಿವು ಸಿಕ್ಕಿದ ತಕ್ಷಣ ಅಥವಾ ಬರುವುದನ್ನು ನೋಡಿದರೆ ನಮ್ಮನ್ನು ಎಚ್ಚರಿಸು ಎಂದು ಹೇಳಿದ್ದಿರಲ್ಲವೇ? ನಾನು ಅದೇ ಮಾಡಿದೆ. ಏಕೆಂದರೆ ಯಾವಾಗ ನೀವು ಒಳಗೆ ಹೋದಿರೋ, ಆಗ ನನಗೆ ನಾಲ್ಕೂ ಕಡೆಯಿಂದಲೂ ಶ್ರೀ ಗಣೇಶನೇ ಕಂಡು ಬರುತ್ತಿದ್ದನು ! ಆಗ ನನ್ನ ಭಾವ ಜಾಗೃತವಾಯಿತು ಹಾಗೂ ಸಾಕ್ಷಾತ್ ಭಗವಂತನನ್ನು ನನ್ನ ಮುಂದೆ ನೋಡಿ ಅವನ ಸ್ವಾಗತಕ್ಕೆಂದು ಶಂಖನಾದ ಮಾಡಿದೆ’.

ಅದನ್ನು ಕೇಳಿದ ಕಳ್ಳರಿಗೆ ತಾವು ಯಾರನ್ನು ಕಳ್ಳನೆಂದು ತಮ್ಮ ಜೊತೆಯಲ್ಲಿ ಕರೆದುಕೊಂಡು ಬಂದಿದ್ದೆವೋ, ಅವನು ಒಬ್ಬ ಸರಳ ಗಣೇಶಭಕ್ತನಾಗಿದ್ದಾನೆ ಎನ್ನುವುದು ಅವರ ಗಮನಕ್ಕೆ ಬಂದಿತು. ಅವರ ಅಂತಹ ಭಾವ ಹಾಗೂ ಸ್ವಲ್ಪ ಸಮಯ ಅವರೊಂದಿಗೆ ಇದ್ದ ಕಾರಣ ಕಳ್ಳರಿಗೆ ಕಳ್ಳತನ ಮಾಡುವ ಇಚ್ಛೆಯಾಗಲಿಲ್ಲ ಹಾಗೂ ಆ ಕಳ್ಳರಿಗೂ ಭಗವಂತನ ಬಗ್ಗೆ ಭಾವಜಾಗೃತಿಯಾಯಿತು. ಕಳ್ಳರು ತಮ್ಮ ಕೈಯ್ಯಲ್ಲಿದ್ದ ಎಲ್ಲಾ ಶಸ್ತ್ರಗಳನ್ನೂ ಕೆಳಗೆ ಎಸೆದರು ಹಾಗೂ ಮತ್ತೆಂದಿಗೂ ಕಳ್ಳತನ ಮಾಡದಿರಲು ತೀರ್ಮಾನಿಸಿದರು. ಎಲ್ಲ ಕಳ್ಳರು ಗಣೇಶದಾಸರ ಚರಣಗಳನ್ನು ಹಿಡಿದುಕೊಂಡರು. ಮುಂದೆ ಆ ಕಳ್ಳರೆಲ್ಲರೂ ಶ್ರೀ ಗಣೇಶದಾಸರ ಶಿಷ್ಯರಾದರು.

ಬಾಲಮಿತ್ರರೇ, ನೋಡಿದಿರಾ ಭಕ್ತಿಯನ್ನು ಮಾಡುವುದರಿಂದ ನಾಲ್ಕೂ ಕಡೆಯೂ ಭಗವಂತನೇ ಕಾಣಿಸುತ್ತಾನೆ ಹಾಗೂ ಭಕ್ತನ ಸಾನಿಧ್ಯದಲ್ಲಿ ಕಳ್ಳರ ಮನಸ್ಸು ಕೂಡ ಪರಿವರ್ತನೆಯಾಗುತ್ತದೆ.

Leave a Comment