ಸಂಶೋಧನೆಗಳ ಮೂಲಕ ತಂತ್ರಜ್ಞಾನವನ್ನು ಪ್ರಭಾವಿಯಾಗಿ ಉಪಯೋಗಿಸುವ ಇಸ್ರೇಲ್‌!

೧೪ ಮೇ ರಂದು ಇರುವ ಇಸ್ರೇಲಿನ ಸ್ವಾತಂತ್ರ್ಯದಿನದ ನಿಮಿತ್ತ….

ಇಸ್ರೇಲ ಎಂದರೆ 'ಮೊಸಾದ' ಎಂಬ ಜಗತ್ಪ್ರಸಿದ್ಧ ಗುಪ್ತಚರ ಸಂಘಟನೆಯ ನೆನಪಾಗುತ್ತದೆ. ಅವರ ಸೈನ್ಯದ ಸಿದ್ಧತೆ, ಪ್ರತಿಯೊಬ್ಬ ನಾಗರಿಕನಿಗೂ ಕಡ್ಡಾಯವಾಗಿರುವ ಸೈನ್ಯ ಪ್ರಶಿಕ್ಷಣ, ಎರಡನೇ ಮಹಾಯುದ್ಧದಲ್ಲಿ ಜ್ಯೂಗಳನ್ನು ಹಿಂಸಿಸಿದ ಜರ್ಮನಿಯ ಅಧಿಕಾರಿಗಳನ್ನು ಜಗತ್ತಿನಾದ್ಯಂತ ಹುಡುಕಿ ಅವರನ್ನು ಅಂತರರಾಷ್ಟ್ರೀಯ ನ್ಯಾಯಾಲಯದ ಎದುರು ತರುವ ಇಸ್ರೇಲಿನ ಜಿಗುಟುತನ… ಹೆಚ್ಚಿನವರ ಅನಿಸಿಕೆಯಂತೆ ಇಸ್ರೇಲ ಎಂದರೆ ಯುದ್ಧ ಅಥವಾ ಅದಕ್ಕೆ ಸಂಬಂಧಿಸಿದ ವಿವಿಧ ಕಥೆಗಳಿಗೆ ಸಂಬಂಧಿಸಿದ ದೇಶ ! ಮೇ ೧೪ ರಂದು ಇಸ್ರೇಲಿನ ಸ್ವಾತಂತ್ರ್ಯದಿನವಾಗಿದೆ. ಈ ನಿಮಿತ್ತ ಈ ದೇಶದ ಪ್ರಗತಿಯ ಕಥೆಯನ್ನು ಪ್ರಕಾಶಿಸುತ್ತಿದ್ದೇವೆ.

ನೀರಿನ ಅಭಾವ, ಆಹಾರ ಧಾನ್ಯಗಳ ಉತ್ಪಾದನೆಯು ಅತ್ಯಂತ ಕಡಿಮೆ ಇದ್ದರೂ
೬೦ ವರ್ಷಗಳಲ್ಲಿ ಅತಿದೊಡ್ಡ ಪ್ರಗತಿಯನ್ನು ಸಾಧಿಸುವ ಇಸ್ರೇಲ !

ಇಸ್ರೇಲಿನ ಪ್ರತಿಯೊಬ್ಬ ನಾಗರಿಕನೂ ತನ್ನ ಆಯುಷ್ಯವನ್ನು ತನ್ನ ದೇಶದೊಂದಿಗೆ ಜೋಡಿಸಿರುವುದೇ ಇಸ್ರೇಲಿನ ಪ್ರಗತಿಯ ರಹಸ್ಯವಾಗಿದೆ. ಇಸ್ರೇಲಿನ ಹೋರಾಟಕ್ಕೆ ೨ ಸಾವಿರ ವರ್ಷಕ್ಕಿಂತಲೂ ಹೆಚ್ಚಿನ ವರ್ಷಗಳ ಇತಿಹಾಸವಿದೆ. ಆದರೆ ಅವರ ಸ್ವಾತಂತ್ರ್ಯ ಕಥೆಯು ಇತ್ತಿಚಿನ ಅಂದಾಜು ೬೫ ಹಿಂದೆಯ ಮಾತು. ನಿಖರವಾಗಿ ಹೇಳಬೇಕೆಂದರೆ ೧೪.೫.೧೯೪೮ರಂದು ಇಸ್ರೇಲ ಎಂಬ ದೇಶವು ಅಸ್ತಿತ್ವಕ್ಕೆ ಬಂತು. ನಂತರದ ವರ್ಷಗಳಲ್ಲಿ ಇಸ್ರೇಲ ಬಹುದೊಡ್ಡ ಪ್ರಗತಿಯನ್ನು ಸಾಧಿಸಿತು. ಇಸ್ರೇಲ ಸತತವಾಗಿ ಯುದ್ಧದ ನೆರಳಿನಲ್ಲಿಯೇ ಇತ್ತು. ದೇಶದ ಅಸ್ತಿತ್ವವನ್ನು ನಷ್ಟಗೊಳಿಸಲು ಸುತ್ತಮುತ್ತಲಿನ ಎಲ್ಲ ರಾಷ್ಟ್ರಗಳೂ ಹೊಂಚುಹಾಕಿ ಕುಳಿತಿದ್ದವು. ನೀರಿನ ಕೊರತೆ ಹಾಗೂ ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆ ಇದ್ದರೂ ಇಂತಹ ಪ್ರಗತಿಯನ್ನು ಸಾಧಿಸಿರುವುದು ನಿಜವಾಗಿಯೂ ಸ್ತುತ್ಯಾರ್ಹ! ಭಾರತ ಸೇರಿದಂತೆ ಜಗತ್ತಿನ ಇತರ ದೇಶಗಳಿಗೂ ಅನುಕರಣೀಯ ವಿಷಯವಾಗಿದೆ.

ಇಸ್ರೇಲ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ತಾಂತ್ರಿಕ ಪ್ರಗತಿಯ ದಿಕ್ಕಿನಲ್ಲಿ ಹಾಕಿದ ದಾಪುಗಾಲು !

ಅ. ನೀರು

ಅ ೧. ಸಮುದ್ರದ ನೀರಿನಿಂದ ಕುಡಿಯುವ ನೀರನ್ನು ಸಿದ್ಧಪಡಿಸುವುದು : ಇಸ್ರೇಲ ಉಪ್ಪು ನೀರಿನಿಂದ ಕುಡಿಯಲು ಯೋಗ್ಯವಾದ ಸಿಹಿನೀರನ್ನು ನಿರ್ಮಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಸಿತು. 'ವೈಟ್ ವಾಟರ್' ಹೆಸರಿನ ಅವರ ದೊಡ್ಡ ಕಾರಖಾನೆಯನ್ನು ನೋಡಲು ನಾವು ಹೋಗಿದ್ದೆವು. ಈ ಕಾರಖಾನೆಯು ಒಂದು ರೀತಿಯಲ್ಲಿ ಸಕ್ಕರೆ ಕಾರಖಾನೆಯಂತಿದೆ. ದೊಡ್ಡ ಯಂತ್ರಗಳು, ರಾಸಾಯನಿಕ ಮಿಶ್ರಣಗಳ ದೊಡ್ಡ ಸಿಲಿಂಡರಗಳು, ದೊಡ್ಡ ದೊಡ್ಡ 'ವಾಟರ ಬೆಡ್' ಈ ಎಲ್ಲವುಗಳ ಮೂಲಕ ನೀರು ಹರಿದುಬಂದು ಹೋಗುತ್ತಿರುತ್ತದೆ. ಅನಂತರ ಅದರಲ್ಲಿ ಕುಡಿಯುವ ನೀರಿಗಾಗಿ ಯೋಗ್ಯವಾಗಿರುವ ಕೆಲವು ದ್ರವ್ಯಗಳನ್ನು ಸೇರಿಸಿ ಕುಡಿಯುವ ನೀರನ್ನು ಸಿದ್ಧಪಡಿಸುತ್ತಾರೆ. ಈ ಕಾರಖಾನೆಯಲ್ಲಿ ಪ್ರತಿದಿನ ಕೆಲವು ದಶಲಕ್ಷ ಲೀಟರ ನೀರು ಸಿದ್ಧವಾಗುತ್ತದೆ.

ಅ ೨. ನೀರನ್ನು ಸಿದ್ಧಪಡಿಸುವಾಗ ವಿದ್ಯುತ ಉತ್ಪಾದನೆ ಆಗುತ್ತಿರುವುದರಿಂದ, ವಿದ್ಯುತ್ ಉತ್ಪಾದನೆಯ ವಿಶೇಷ ಅವಶ್ಯಕತೆ ಇಲ್ಲದಿರುವುದು : ಅವರಿಗೆ 'ಇಷ್ಟೆಲ್ಲ ಪ್ರಕ್ರಿಯೆಗಳಿಂದ ಸಿದ್ಧವಾದ ನೀರು ಅತ್ಯಂತ ದುಬಾರಿಯಾಗಿರುವುದರಿಂದ ಸಾಮಾನ್ಯ ಜನರಿಗೆ ಅದು ಹೇಗೆ ಅನುಕೂಲವಾಗುತ್ತದೆ.' ಎಂದು ಕೇಳಿದೆವು. ಆಗ ಅವರು ನೀರಿನ ಶುದ್ಧೀಕರಣ ನಡೆಯುತ್ತಿರುವಾಗ ಅದೇ ನೀರಿನಿಂದ ವಿದ್ಯುತ ಉತ್ಪಾದನೆ ಆಗುತ್ತಿರುವುದರ ಮಾಹಿತಿಯನ್ನು ನೀಡಿದರು. ಆ ಕಾರಖಾನೆಯು ಆ ವಿದ್ಯುತ್ತಿನಿಂದ ನಡೆಯುತ್ತಿತ್ತು. ವಿದ್ಯುತ್ತಿನ ವೆಚ್ಚ ಇರುವುದಿಲ್ಲ. ಕಚ್ಚಾ ಸಾಮಗ್ರಿಯಾದ ಸಮುದ್ರದ ನೀರು ಪುಕ್ಕಟೆಯಾಗಿ ದೊರೆಯುತ್ತಿತ್ತು. ಇದರ ಹೊರತು ಈ ಪ್ರಕ್ರಿಯೆಯಲ್ಲಿ ಕುಡಿಯಲು ಯೋಗ್ಯವಲ್ಲದ ನೀರನ್ನು ಬೇಸಾಯ ಮಾಡಲು ನೀಡುತ್ತಾರೆ. ಈ ಸಂಸ್ಥೆಗೆ ಅದರಿಂದ ಇನ್ನೊಂದು ಉತ್ಪನ್ನವೂ ದೊರೆಯುತ್ತದೆ.

ಅ ೩. ಕೊಳಕು ನೀರನ್ನು ಶುದ್ಧೀಕರಿಸಿ ಬೇಸಾಯಕ್ಕಾಗಿ ಉಪಯೋಗಿಸುವುದು : ಕೊಳೆ ನೀರಿನ ಉದ್ಯೋಗದಲ್ಲಿಯೂ ಅವರು ಹೀಗೆಯೇ ಪ್ರಗತಿ ಸಾಧಿಸಿದ್ದಾರೆ. ಯಾಂತ್ರಿಕ ಪ್ರಕ್ರಿಯೆಯಿಂದ ಕೊಳಕು, ದುರ್ವಾಸನೆಯುಕ್ತ ನೀರಿನಲ್ಲಿನ ಎಲ್ಲ ಅನವಶ್ಯಕ ಅಂಶಗಳನ್ನು (ಎಣ್ಣೆ, ಗ್ರೀಸ್, ಕಸ ಇತ್ಯಾದಿಗಳಿರುವ ನೀರು) ಬೇರ್ಪಡಿಸಲಾಗುತ್ತದೆ. ಅನಂತಹ ಬಹುತಾಂಶ ಮಟ್ಟಿಗೆ ಶುದ್ಧವಾದ ನೀರನ್ನು ಭೂಮಿಯಲ್ಲಿ ಸಂಗ್ರಹಿಸಲಾಗುತ್ತದೆ. ಬೇಸಾಯಕ್ಕೆ ಅವಶ್ಯಕವಾದ ಲವಣಗಳನ್ನು ಅದರಲ್ಲಿ ಬೆರೆಸಲಾಗಿ ಆ ನೀರನ್ನು ಬೇಸಾಯಕ್ಕಾಗಿ ಮಾರಲಾಗುತ್ತದೆ. ಈ ಎಲ್ಲವುಗಳನ್ನು ಯಂತ್ರಗಳಿಂದ ಸಾಧಿಸಲಾಗುತ್ತದೆ. ಅದಕ್ಕಾಗಿ ಬೇಕಾದ ವಿದ್ಯುತ ಪಂಪಗಳು ಭೂಮಿಯ ಅಡಿಯಲ್ಲಿ ಇರುತ್ತವೆ. ಯಂತ್ರಗಳ ಮೂಲಕವೇ ಅವುಗಳ ವ್ಯವಸ್ಥಾಪನೆಯನ್ನು ನೋಡಿಕೊಳ್ಳಲಾಗುತ್ತದೆ. ಅವರು ಉಪಯೋಗವಾದ ನೀರಿನಲ್ಲಿ ಶೇ ೭೫ರಷ್ಟು ನೀರಿನ ಪುನರ್ಬಳಕೆ ಮಾಡುತ್ತಾರೆ. ಅವರು ಮುಂಬರುವ ವರ್ಷಗಳಲ್ಲಿ ಈ ಪ್ರಮಾಣವನ್ನು ಶೇ. ೯೫ ಕ್ಕೆ ಏರಿಸುವ ಪ್ರಯತ್ನದಲ್ಲಿದ್ದಾರೆ. ಇದಕ್ಕಾಗಿ ಅವರ ಪ್ರಯೋಗ ಶಾಲೆಗಳಲ್ಲಿ ಸಂಶೋಧನೆಗಳು ನಡೆಯುತ್ತಿವೆ.

ತ್ಯಾಜ್ಯ

ಅ ೧. ತ್ಯಾಜ್ಯದ ನಿರ್ವಹಣೆ : ತ್ಯಾಜ್ಯ ನಿರ್ವಹಣೆಯಲ್ಲಿ ಇಸ್ರೇಲ ಮಹತ್ತರವಾದ ಕ್ರಾಂತಿಯನ್ನು ಮಾಡಿದೆ. ಇದಕ್ಕಾಗಿ ಬೇರೆ ಬೇರೆ ವೈಯಕ್ತಿಕ ಸಂಸ್ಥೆಗಳ ದೊಡ್ಡ ದೊಡ್ಡ ಕಾರಖಾನೆಗಳಿವೆ. ಎಲ್ಲ ತ್ಯಾಜ್ಯವನ್ನು ಇಲ್ಲಿ ಸಂಗ್ರಹಿಸಲಾಗುತ್ತದೆ. ತ್ಯಾಜ್ಯದ ದೊಡ್ಡ ರಾಶಿಯು ಈ ಸಂಸ್ಥೆಗಳ ಸುತ್ತಲೂ ಇವೆ. ತ್ಯಾಜ್ಯದ ಕಚ್ಚಾ ಸಾಮಗ್ರಿಯನ್ನು ಮೊದಲಿಗೆ ದೊಡ್ಡ ಪ್ಯಾನಲನ ಮೂಲಕ ಗಾಳಿಯ ಪ್ರಕ್ರಿಯೆಗೆ ಒಳಪಡಿಸುತ್ತಾರೆ. ಇದರಲ್ಲಿ ಹಗುರವಾದ ತ್ಯಾಜ್ಯವು (ಪ್ಲಾಸ್ಟಿಕ್, ಕಾಗದ ಅಥವಾ ದಾರದ ತುಂಡುಗಳು) ಹಾರಿ ಒಂದು ದೊಡ್ಡ ತೊಟ್ಟಿಯಲ್ಲಿ ಸಂಗ್ರಹವಾಗುತ್ತದೆ. ಉಳಿದ ತ್ಯಾಜ್ಯವನ್ನು ನೀರಿನ ಪ್ರಕ್ರಿಯೆಗೆ ಒಳಪಡಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಭಾರದ ತ್ಯಾಜ್ಯ ವಸ್ತುಗಳ ಕೊಳೆಯು ದೂರವಾಗುತ್ತದೆ. ನೀರಿನ ಪ್ರಕ್ರಿಯೆಯಿಂದ ಸ್ವಚ್ಛವಾದ ತ್ಯಾಜ್ಯವನ್ನು ಒಂದು ಕಡೆ ಸಂಗ್ರಹಿಸಲಾಗುತ್ತದೆ.

ಆ ೨. ಭೂಮಿಯನ್ನು ಸಮತಟ್ಟುಗೊಳಿಸಲು ಈ ತ್ಯಾಜ್ಯವನ್ನು ಉಪಯೋಗಿಸುವುದು : ಭೂಮಿಯ ಮೇಲಿನ ಹೊಂಡಗಳನ್ನು ಮುಚ್ಚಲು ಈ ತ್ಯಾಜ್ಯದ ಉಪಯೋಗವಾಗುತ್ತದೆ. ನಮ್ಮಲ್ಲಿ ಒಂದೆಡೆ ಭೂಮಿಯನ್ನು ಸಮತಟ್ಟುಗೊಳಿಸಲು ಇನ್ನೊಂದೆಡೆಯ ಮಣ್ಣನ್ನು ತೆಗೆದು ಅಲ್ಲಿ ಹೊಂಡ ಅಗೆಯಲಾಗುತ್ತದೆ ಅನಂತರ ಈ ಮಣ್ಣಿನಿಂದ ಭೂಮಿಯನ್ನು ಸಮತಟ್ಟುಗೊಳಿಸಲಾಗುತ್ತದೆ. ಈ ಕೆಲಸಕ್ಕಾಗಿ ಇಸ್ರೇಲಿನಲ್ಲಿ ತ್ಯಾಜ್ಯವನ್ನು ಉಪಯೋಗಿಸಲಾಗುತ್ತದೆ. ಸಂಗ್ರಹಿಸಲಾದ ಘನತ್ಯಾಜ್ಯದಲ್ಲಿ ಶೇ. ೭೫ ರಷ್ಟು ತ್ಯಾಜ್ಯವನ್ನು 'ಲ್ಯಾಂಡಫಿಲ್'ಗಾಗಿ ಉಪಲಬ್ಧಮಾಡಿಕೊಡುತ್ತಾರೆ ಅಂದರೆ ಈ ತ್ಯಾಜ್ಯವನ್ನು ಮಾರಲಾಗುತ್ತದೆ. ಇದು ಈ ಸಂಸ್ಥೆಗಳ ಉತ್ಪನ್ನದ ಪ್ರಮುಖ ಭಾಗವಾಗಿದೆ. ತ್ಯಾಜ್ಯವನ್ನು ಉಪಯೋಗಿಸುವ ಮೊದಲು ಅದು ಕೊಳೆತು ಮಣ್ಣಿನಂತೆ ಆಗಿರುತ್ತದೆ. ಆದುದರಿಂದ ಈ ತ್ಯಾಜ್ಯವು ಹೊಂಡಗಳನ್ನು ಮುಚ್ಚಲು ಉಪಯುಕ್ತವಾಗುತ್ತದೆ.

ಆ ೩. ಕೊಳೆತ ಕಸವನ್ನು ಸಂಸ್ಕರಿಸಿ ಬೇಸಾಯಕ್ಕಾಗಿ ಗೊಬ್ಬರ ತಯಾರಿಸುವುದು : ತ್ಯಾಜ್ಯ ನಿರ್ವಹಣೆಯ ಇನ್ನೊಂದು ಹೊಸ ತಂತ್ರವೆಂದರೆ 'ಕಾಂಪೋಸ್ಟ ಗೊಬ್ಬರ' ತಯಾರಿಸುವುದು. ತ್ಯಾಜ್ಯವು ಕೊಳೆತು ಮಣ್ಣಿನಂತೆ ಆದನಂತರ ಅದರ ಮೇಲೆ ಪುನಃ ರಾಸಾಯನಿಕ ಪ್ರಕ್ರಿಯೆಗಳನ್ನು ಮಾಡಿ ಅದರಲ್ಲಿ ಗೊಬ್ಬರ ಸೇರಿಸಲಾಗುತ್ತದೆ. ಅನಂತರ ಈ ಮಣ್ಣನ್ನು ಬೇಸಾಯಕ್ಕಾಗಿ ಗೊಬ್ಬರ ಎಂದು ಮಾರಲಾಗುತ್ತದೆ. ಇದು ಈ ಸಂಸ್ಥೆಗಳ ಉತ್ಪನ್ನದ ಪ್ರಮುಖ ಭಾಗವಾಗಿದೆ.

ಆ ೪. ಉಳಿದ ತ್ಯಾಜ್ಯದ ಉಪಯೋಗವೆಂದರೆ 'ಕಸದಿಂದ ರಸ' ತಯಾರಿಸುವುದು : ಉಳಿದ ತ್ಯಾಜ್ಯ, ಅಂದರೆ ಪ್ಲಾಸ್ಟಿಕ್ ಬಾಟಲಿಗಳು ಅಥವಾ ಇತರ ಬಾಟಲಿಗಳಿಂದ ಅನೇಕ ಆಲಂಕಾರಿಕ ವಸ್ತುಗಳನ್ನು ತಯಾರಿಸಲಾಗುತ್ತದೆ. ಅವರು ತ್ಯಾಜ್ಯದ ಯಾವುದೇ ಭಾಗವು ವ್ಯರ್ಥವಾಗಬಾರದೆಂದೇ ಪಣತೊಟ್ಟಿದ್ದಾರೆ. ಆಸನದ ಮೇಲೆ ಹಾಕಲು ಉಪಯೋಗಿಸುವ 'ಫೋಮ'ನ್ನೂ ತ್ಯಾಜ್ಯದಿಂದ ತಯಾರಿಸಲಾಗುತ್ತದೆ. ಈ ಬಗ್ಗೆ ಮೊದಲಿಗೆ ನಂಬಿಕೆ ಬರುವುದಿಲ್ಲ ಆದರೆ ಆ ವಸ್ತುಗಳು ಸಿದ್ಧವಾಗುವಾಗುವುದನ್ನು ಪ್ರತ್ಯಕ್ಷವಾಗಿ ನೋಡಿದಾಗ ನಂಬಲೇ ಬೇಕಾಗುತ್ತದೆ! ಈ ಉದ್ಯೋಗಾಲಯಗಳನ್ನು ನೋಡಲು ನಿರ್ಬಂಧವಿಲ್ಲ. ಅಲ್ಲಿ ಮಕ್ಕಳ ಆಟದ ಸಾಮಗ್ರಿಗಳೂ ಇಂತಹ ತ್ಯಾಜ್ಯದಿಂದಲೇ ತಯಾರಾಗುತ್ತವೆ.

ಬೇಸಾಯ

ಇ ೧. ಹನಿ ನೀರಾವರಿಯಿಂದ ಬೇಸಾಯ ಮಾಡುವುದು : ಇಸ್ರೇಲಿನ ಬೇಸಾಯವೆಂದರೆ ಸಂಶೋಧನೆಯ ವಿಷಯವಾಗಿದೆ. ನಮ್ಮಲ್ಲಿ ಬೇಸಾಯಕ್ಕೆ ಯಥೇಚ್ಛ ನೀರನ್ನು ಪೂರೈಸಲಾಗುತ್ತದೆ. ಇನ್ನೊಂದೆಡೆ ವಿದ್ಯುತ್ ಕಡಿತದ ತೊಂದರೆ. ಇದಕ್ಕಾಗಿ ಬಹಳಷ್ಟು ಜನರು ನೀರಿನ ಪಂಪ್ ಬಟನ ಚಾಲು ಇಟ್ಟು ಮಲಗುವ ಉಪಾಯವನ್ನು ಹುಡುಕಿದರು. ವಿದ್ಯುತ ಬಂದಾಗ ಪಂಪ ಚಾಲೂ ಇರುವುದರಿಂದ ನೀರು ಗದ್ದೆಯಿಂದ ಹರಿದುಹೋಗುತ್ತದೆ. ನೀರಿನ ತೀವ್ರ ಕೊರತೆ ಅನುಭವಿಸುವ ಇಸ್ರೇಲ 'ನೀರಿನ ಅಪವ್ಯಯ ನಮ್ಮಲ್ಲಿ ಸಾಧ್ಯವಿಲ್ಲ' ಎಂಬುದನ್ನು ಗಮನದಲ್ಲಿಟ್ಟು 'ಡ್ರಿಪ್ ಇರಿಗೇಶನ' ಅಂದರೆ ಹನಿ ನೀರಾವರಿಯ ಪದ್ಧತಿಯ ಸಂಶೋಧನೆಯನ್ನು ಮಾಡಿತು. ಅವಶ್ಯಕವಿರುವಷ್ಟೇ ನೀರನ್ನು ಉಪಯೋಗಿಸುವುದು ಇದರ ಉದ್ದೇಶವಾಗಿದೆ .

ಇ ೨. ಅವಶ್ಯಕತೆಗನುಸಾರ ಗಿಡಗಳ ಬೇರಿಗೆ ನೀರುಣಿಸುವುದು : ಗದ್ದೆಯಲ್ಲಿ ಸಾಧಾರಣವಾಗಿ ೧ ರಿಂದ ೨ ಅಡಿಯ ಕಾಲುವೆಯನ್ನು ಮಾಡಲಾಗುತ್ತದೆ. ಇದರಿಂದ ನೀರಿನ ಕೊಳವೆಯನ್ನು ಒಯ್ಯಲಾಗಿದೆ. (ಈ ಕೊಳವೆಗಳನ್ನು 'ಪೈಪ್' ಎಂದು ಹೇಳಲು ಸಾಧ್ಯವಿಲ್ಲ ಏಕೆಂದರೆ ಅವು ಅಷ್ಟು ಸಣ್ಣದಾಗಿವೆ!) ಈ ಕಾಲುವೆಯ ಒಂದು ತುದಿಯಲ್ಲಿ ಪೈರು ಅಥವಾ ಗಿಡಗಳಿರುತ್ತವೆ. ಗಿಡ ಇರುವ ಜಾಗದಲ್ಲಿ ಕೊಳವೆಗೆ ರಂಧ್ರವಿರುತ್ತದೆ. ಅಲ್ಲಿಂದ ಬರುವ ನೀರು ನೇರವಾಗಿ ಬೇರುಗಳಿಗೆ ತಲುಪುತ್ತದೆ. ಆ ಗಿಡಕ್ಕೆ ಅವಶ್ಯಕವಿರುವಷ್ಟೇ ನೀರನ್ನು ನೀಡಲಾಗುವುದರಿಂದ ಗಿಡಗಳ ಬುಡದ ಭಾಗದಲ್ಲಿ ತೇವಾಂಶವಿರುತ್ತದೆ. ಗಿಡಗಳಿಗೆ ನೀರುಣಿಸುವ ಸಮಯ ನಿಗದಿಸಲ್ಪಟ್ಟಿರುತ್ತದೆ.

ಇ ೩. ಆಧುನಿಕ ತಂತ್ರಜ್ಞಾನದಿಂದ ಉತ್ಪಾದನೆಯಲ್ಲಿ ವೃದ್ಧಿಯ : ಎಲ್ಲ ರೀತಿಯ ಬೇಸಾಯಕ್ಕೆ ಇದೇ ಪದ್ಧತಿಯಲ್ಲಿ ನೀರುಣಿಸಲಾಗುತ್ತದೆ. ವಿವಿಧ ಪ್ರಕಾರದ ತರಕಾರಿ ಹಾಗೂ ಧಾನ್ಯಗಳನ್ನು ಬೆಳೆಸಲಾಗುತ್ತದೆ. ಬೇಸಾಯದಲ್ಲಿ ಬಿತ್ತನೆ, ಸಾಗುವಳಿ, ವೆಚ್ಚದಲ್ಲಿ ಸತತ ಸಂಶೋಧನೆಗಳನ್ನು ಮಾಡಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿದ್ದಾರೆ ಹಾಗೂ ಅದನ್ನು ಉಪಯೋಗಿಸಿ ಉತ್ಪಾದನೆಯನ್ನು ಹೆಚ್ಚಿಸಿದ್ದಾರೆ. ಇಲ್ಲಿನ ಹೆಚ್ಚಿನ ಕೆಲಸಗಳನ್ನು ಯಂತ್ರಗಳ ಮೂಲಕವೇ ಮಾಡಲಾಗುತ್ತದೆ.

ನೀರಿನ ಶುದ್ಧೀಕರಣ ಕಾರಖಾನೆಗಳ ಭೇಟಿಯು ಈ ಪ್ರವಾಸದ ಮುಖ್ಯ ಉದ್ದೇಶವಾಗಿದ್ದರಿಂದ ಬೇಸಾಯದ ವಿಷಯಕ್ಕೆ ಹೆಚ್ಚಿನ ಬಿಡುವಿರಲಿಲ್ಲ.

ತಾಂತ್ರಿಕ ಪ್ರಗತಿ

ಈ ೧. ಕಡಿಮೆ ಜನಸಂಖ್ಯೆ ಇರುವ ಕೊರತೆಯನ್ನು ಯಂತ್ರಗಳು ದೂರಗೊಳಿಸುವುದು : ಇಸ್ರೇಲಿನ ಜನಸಂಖ್ಯೆಯು ಕೇವಲ ೭೦ ಲಕ್ಷದಷ್ಟಿದೆ. ಸಹಜವಾಗಿ ಅಲ್ಲಿ ಕೆಲಸದ ತುಲನೆಯಲ್ಲಿ ಮನುಷ್ಯಬಲವು ಕಡಿಮೆಯಿದೆ. ಆದರೆ ಅವರು ಈ ಕೊರತೆಯನ್ನು ಯಂತ್ರಗಳಿಂದ ದೂರಗೊಳಿಸಿದರು. ಒಂದು ಜಲಶುದ್ಧೀಕರಣ ಕಾರಖಾನೆಯಲ್ಲಿ ಚರ್ಚಿಸುತ್ತಿರುವಾಗ ಸಹಜವಾಗಿ ಕಾರ್ಮಿಕರ ಸಂಖ್ಯೆಯ ಬಗ್ಗೆ ಕೇಳಿದಾಗ ಒಂದು ದೊಡ್ಡ ಉದ್ಯೋಗಾಲಯವನ್ನು ಕೇವಲ ೫೦ ಜನ ಕಾರ್ಮಿಕರು ನಡೆಸುತ್ತಾರೆ. ರಾತ್ರಿಯ ಸಮಯದಲ್ಲಿ ಕೇವಲ ೨ ಜನ ಕಾರಖಾನೆಯ ಕೆಲಸವನ್ನು ನೋಡಿಕೊಳ್ಳುತ್ತಾರೆ. ಅವರು ಕೇವಲ ಗಣಕ ಯಂತ್ರದ ಪರದೆಯ ಮೇಲೆ (ಸ್ಕ್ರೀನ) ನೋಡುತ್ತಿರುತ್ತಾರೆ. ಇದರಿಂದ ಕಾರಖಾನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದು ಕಾಣಿಸುತ್ತದೆ. ಏನಾದರೂ ಅಡಚಣೆಗಳು ಬಂದಲ್ಲಿ ತಕ್ಷಣ ಅದನ್ನು ಕುಳಿತಲ್ಲೇ ಪರಿಹರಿಸಲಾಗುತ್ತದೆ. ೫೦ ಕಾರ್ಮಿಕರಲ್ಲಿ ೧೦ ಜನ ರಸಾಯನಶಾಸ್ತ್ರದ ಅಭಿಯಂತರಿದ್ದಾರೆ (ಕೆಮಿಕಲ್ ಎಂಜಿನಿಯರ್ಸ್), ಅಂದರೆ ಜಲಶುದ್ಧೀಕರಣಕ್ಕಾಗಿ ಬೇಕಾಗುವ ರಾಸಾಯನಿಕಗಳ ಪ್ರಮಾಣವನ್ನು ಒಂದು ಬಾರಿ ನಿಗದಿಪಡಿಸಿದರೆ ಅವರ ಕೆಲಸ ಮುಗಿಯಿತು. ಅನಂತರ ಅವರು ಕೇವಲ ಗಮನಿಸುತ್ತಿರುತ್ತಾರೆ.

ಈ ೨. ಯಂತ್ರಗಳ ಮಾಧ್ಯಮದಿಂದ ರಸ್ತೆ ಸ್ವಚ್ಛತೆ : ಇಸ್ರೇಲಿನಲ್ಲಿ ರಸ್ತೆಗಳನ್ನು ಯಂತ್ರಗಳಿಂದಲೇ ಗುಡಿಸಲಾಗುತ್ತದೆ. ಬೆಳಗ್ಗಿನ ಜಾವ ದೊಡ್ಡ ಯಂತ್ರಗಳನ್ನು ಒಬ್ಬ ವ್ಯಕ್ತಿಯು ಚಲಾಯಿಸಿ ರಸ್ತೆಗಳನ್ನು ಸ್ವಚ್ಚಗೊಳಿಸುತ್ತಾನೆ.

ತಂತ್ರಜ್ಞಾನದ ಪ್ರಭಾವಿ ಬಳಕೆ ಹಾಗೂ ಅದರಲ್ಲಿನ ಸತತ ಸಂಶೋಧನೆಯು ಆಧುನಿಕ ಇಸ್ರೇಲಿನ ಪ್ರಗತಿಯ ಅಡಿಪಾಯವಾಗಿದೆ.

ರಾಜು ಇನಾಮದಾರ. ('ದೈನಿಕ ಲೋಕಸತ್ತಾ', ೨೯.೫.೨೦೧೧)