ರಾಣಿ ದುರ್ಗಾವತಿ

ರಾಣಿ ದುರ್ಗಾವತಿಯು ಚಾಂಡೇಲ ರಾಜಪುತ ವಂಶದವರು. ಅವರ ಜನ್ಮವು ಉತ್ತರ ಪ್ರದೇಶದ ಬಾಂಡಾ ಎಂಬಲ್ಲಿನ ಕಲಿಂಜಾರ ಕೋಟೆಯಲ್ಲಿ ಆಯಿತು. ಜಗತ್ಪ್ರಸಿದ್ಧ ಖಜುರಾಹೊ ನಗರವನ್ನು ನಿರ್ಮಿಸಿದ ಚಾಂಡೇಲ ರಾಜಪುತರು ಆ ನಗರದಲ್ಲಿ ೮೫ ಭವ್ಯ ಮಂದಿರಗಳನ್ನು ಕೂಡ ನಿರ್ಮಿಸಿದ್ದರು.

೧೫೫೦ರಲ್ಲಿ ರಾಣಿ ದುರ್ಗಾವತಿಯ ಪತಿ, ದಳಪತ ಶಾಹನು ತೀರಿಕೊಂಡ ನಂತರ ಗೊಂಡ ರಾಜ್ಯವನ್ನು ರಾಣಿ ದುರ್ಗಾವತಿಯು ಆಳಿದರು. ಆಗ ಅವರ ಮಗ ವೀರ ನಾರಾಯಣನು ಇನ್ನು ವಯಸ್ಸಿನಲ್ಲಿ ಚಿಕ್ಕವನು. ೧೫೫೬ ರಲ್ಲಿ ಮಾಳವಾ ಪ್ರಾಂತದ ರಾಜನಾಗಿದ್ದ ಬಜ್ ಬಹದ್ದುರನು ಗೊಂಡದ ಮೇಲೆ ಆಕ್ರಮಣ ಮಾಡಿದನು. ಆದರೆ ರಾಣಿ ದುರ್ಗಾವತಿಯು ಸಮರ್ಥವಾಗಿ ಉತ್ತರ ನೀಡಿದರು. ರಾಜ ಬಹದ್ದುರನ ಸೋಲು ಎಷ್ಟು ಹೀನಾಯವಾಗಿತ್ತು ಎಂದರೆ ಮುಂದೆಂದೂ ಕೂಡ ಅವನು ಗೊಂಡದತ್ತ ಕಣ್ಣೆತ್ತಿ ನೋಡಲಿಲ್ಲ.

೧೫೬೪ರಲ್ಲಿ ಮೊಘಲ ರಾಜ ಅಕ್ಬರನು ರಾಣಿ ದುರ್ಗಾವತಿಯ ರಾಜ್ಯದ ಮೇಲೆ ಯುದ್ಧ ಸಾರಿದನು. ಇದಕ್ಕಾಗಿ ೫೦೦೦೦ ಸೈನಿಕರಿದ್ದ ಸೈನ್ಯವನ್ನು ಗೊಂಡದತ್ತ ಕಳುಹಿಸಿದನು. ಈ ಸೈನ್ಯದ ಮುಂದಾಳತ್ವವನ್ನು ಅಬ್ದುಲ್ ಮಜೀದ್ ಖಾನ್ ಎಂಬ ಮೊಘಲನು ವಹಿಸಿದ್ದನು.

ಮಧ್ಯ ಪ್ರದೇಶದ ನಾರ್ರಾಯಿ ಎಂಬಲ್ಲಿ ರಾಣಿ ದುರ್ಗಾವತಿಯು ತನ್ನ ಸೈನ್ಯವನ್ನು ನಿಲ್ಲಿಸಿದಳು. ಒಂದು ಬದಿಯಲ್ಲಿ ಬೆಟ್ಟ ಗುಡ್ಡಗಳು ಮತ್ತೊಂದು ಬದಿಯಲ್ಲಿ ನರ್ಮದಾ ಮತ್ತು ಗೌರ್ ನದಿಗಳು ಇದ್ದ ಈ ಸ್ಥಳದಲ್ಲಿ ರಾಣಿ ದುರ್ಗಾವತಿ ಮತ್ತು ಮೊಘಲ್ ಸೈನ್ಯಗಳ ಮುಖಾಮುಖ ಆಯಿತು. ಎರಡು ಬದಿಗಳಿಂದ ಆಕ್ರಮಣ ಮಾಡಿದ ಮೊಘಳರೊಂದಿಗೆ ರಾಣಿ ಮತ್ತು ಅವರ ಸೈನಿಕರು ಶೌರ್ಯದಿಂದ ಹೋರಾಡಿ ಮೊಘಲರನ್ನು ಹಿಮ್ಮೆಟ್ಟುವಂತೆ ಮಾಡಿದರು! ಆ ದಿನ ಮೊಘಲರ ಸೈನ್ಯವು ಪರಾಭವ ಹೊಂದಿದರು.

ಆ ರಾತ್ರಿ ರಾಣಿಯ ಸೈನ್ಯವು ವಿಶ್ರಾಂತಿಯನ್ನು ಪಡೆಯುತ್ತಿದ್ದಾಗ ರಾಣಿ ತನ್ನ ಸೇನಾಧಿಪತಿಗಳೊಂದಿಗೆ ಮುಂದಿನ ಕಾರ್ಯಾಚರಣೆಯನ್ನು ಚರ್ಚಿಸುತ್ತಿದ್ದಾಗ ರಾಣಿಯು ರಾತ್ರಿಯ ಸಮಯದಲ್ಲಿಯೆ ಮೊಘಲರ ಮೇಲೆ ಆಕ್ರಮಣ ಮಾಡುವ ಬಗ್ಗೆ ವಿಚಾರ ಮಾಡಿದರು. ಆದರೆ ಅವರ ಸೇನಾಧಿಪತಿಗಳು ಇದಕ್ಕೆ ವಿರುದ್ಧವಾಗಿ ಸಲಹೆ ನೀಡಿದರು. ಈ ಚರ್ಚೆಯಿಂದಾಗಿ ಸಮಯದ ಸದುಪಯೋಗ ಮಾಡಿಕೊಂಡ ಮೊಘಲರು ತಮ್ಮ ಫಿರಂಗಿಗಳನ್ನು ರಾಣಿ ದುರ್ಗಾವತಿಯ ಪಾಳೆಯ ಹತ್ತಿರ ತಂದು ನಿಲ್ಲಿಸಿದರು.

ಮುಂದಿಂದ ದಿನ ಯುಧ ಪುನಃ ಆರಂಭವಾಯಿತು. ವೀರ ನಾರಾಯಣ (ರಾಣಿಯ ಮಗ) ಮೂರು ಬಾರಿ ಮೊಘಲರನ್ನು ಹಿಮ್ಮೆಟ್ಟುವಂತೆ ಮಾಡಿದನು. ಆದರೆ ಗಾಯಗೊಂಡಾಗ ಯುಧಭೂಮಿಯಿಂದ ಹಿಂದಿರುಗಬೇಕಾಯಿತು. ರಾಣಿ ಮಾತ್ರ ತನ್ನ ಆನೆ ಸಿಮ್ರಾನ್.ಅನ್ನು ಏರಿ ವೀರಾವೇಶದಿಂದ ಮೊಘಲರೊಂದಿಗೆ ಹೋರಾಡಿದಳು. ಆದರೆ ದುರದೃಷ್ಟದಿಂದ ಎರಡು ಬಾಣಗಳು ರಾಣಿಗೆ ತಗುಲಿದವು. ರಾಣಿಗೆ ತನ್ನ ಅಂತ್ಯ ಸಮೀಪಿಸಿದೆ ಎಂದು ತಿಳಿಯಿತು.

ಯುದ್ಧ ಭೂಮಿಯಿಂದ ಹಿಂದಿರುಗಲು ಸೇನಾಧಿಪತಿಗಳು ಬೇಡಿಕೊಂಡರೂ ವೀರ ಮರಣವನ್ನು ಹೊಂದಲು ಇಚ್ಚಿಸಿದ ರಾಣಿಯು ತನ್ನಲ್ಲಿದ್ದ ಕತ್ತಿಯನ್ನು ಬಳಸಿ ಮಹಾ ಸಮಾಧಿಯನ್ನು ಸಾಧಿಸಿದಳು. ರಾಜಪುತರ ಶೌರ್ಯದ ಅತ್ಯುತ್ತಮ ಉದಾಹರಣೆ ಎಂದರೆ ರಾಣಿ ದುರ್ಗಾವತಿ!

ಮಿತ್ರರೇ, ಭಾರತದ ಈ ಪುಣ್ಯಭೂಮಿಯು ರಾಣಿ ದುರ್ಗಾವತಿಯಂತೆ ಅನೇಕ ಶೂರ ವೀರರನ್ನು ಜನ್ಮ ನೀಡಿದೆ. ಇವರೆಲ್ಲರೂ ತಮ್ಮ ಸರ್ವಸ್ವವನ್ನು ದೇಶಕ್ಕೋಸ್ಕರ ಅರ್ಪಿಸಿದರು. ಈ ಮಹಾನ್ ವ್ಯಕ್ತಿತ್ವಗಳ ಚರಿತ್ರೆಗಳನ್ನು ಓದಿ, ಅದರಿಂದ ಸ್ಪೂರ್ತಿ​ ಪಡೆದು ನಮ್ಮಲ್ಲಿ ರಾಷ್ಟ್ರಪ್ರೇಮವನ್ನು ಬೆಳೆಸಲು ಪ್ರಯತ್ನಿಸೋಣ!

Leave a Comment