ದಾನಶೂರ ಕರ್ಣ

ಮಕ್ಕಳೇ, ಕರ್ಣನು ದುರ್ಯೋಧನನ ಸ್ನೇಹಿತನಾಗಿದ್ದನು. ಅವನು ಒಬ್ಬ ಶ್ರೇಷ್ಟ ದಾನಿ ಎಂದು ಪ್ರಸಿದ್ಧನಾಗಿದ್ದಾನೆ.

ಅವನ ಬಳಿ ಸಹಾಯ ಬೇಡಿ ಬಂದ ಯಾರನ್ನೂ ಅವನು ಬರಿಗೈಯಲ್ಲಿ ಕಳಿಸುತ್ತಿರಲಿಲ್ಲ. ಅವನು ಪ್ರತಿದಿನ ನದಿಗೆ ಸ್ನಾನ ಮಾಡಲು ಹೋಗುತ್ತಿದ್ದನು. ನೀರಿನಲ್ಲಿ ಇಳಿದು ಸೂರ್ಯನಿಗೆ ಅರ್ಘ್ಯವನ್ನು ನೀಡುತ್ತಿದ್ದನು ಮತ್ತು ಅವನ ಬಳಿ ಬಂದ ಯಾಚಕರಿಗೆ ಬೇಡಿದನ್ನು ನೀಡುತ್ತಿದ್ದನು.

ಒಂದು ಸಲ ಭಗವಾನ ಶ್ರೀಕೃಷ್ಣ ಮತ್ತು ಅರ್ಜುನ ಕುಳಿತು ಮಾತಾಡುತ್ತಿದ್ದರು. ಮಾತಾಡುತ್ತಾ ಮಾತಾಡುತ್ತಾ ಕರ್ಣನ ದಾನಶೂರತೆಯ ಬಗ್ಗೆ ಚರ್ಚೆಯಾಯಿತು. ಶ್ರೀ ಕೃಷ್ಣನು ಕರ್ಣನ ದಾನಶೂರತೆಯನ್ನು ಪ್ರಶಂಸಿಸಿದನು. ಶ್ರೀಕೃಷ್ಣನು ಹೇಳಿದನು, "ಕರ್ಣನಂತ ಉದಾರಿ ವ್ಯಕ್ತಿಯು ಯಾರೂ ಇಲ್ಲ." ಇದನ್ನು ಕೇಳಿ ಅರ್ಜುನನು ಆಶ್ಚರ್ಯಚಕಿತನಾದನು ಮತ್ತು ಹೇಳಿದನು, "ಶ್ರೀಕೃಷ್ಣಾ, ಧರ್ಮರಾಜ ಕೂಡ ದಾನವೀರನೇ ಇದ್ದಾನೆ". ಹಾಗಿದ್ದರೆ ಯಾರು ಹೆಚ್ಚು ದಾನವೀರರಿದ್ದಾರೆ ಎಂದು ಅವರು ಚರ್ಚಿಸಲು ಪ್ರಾರಂಭಿಸಿದರು. ಆಗ ಶ್ರೀಕೃಷ್ಣನು, "ಸರಿ ಹಾಗಿದ್ದರೆ, ನಾಳೆಯೇ ನಾವು ಕರ್ಣ ಮತ್ತು ಧರ್ಮರಾಜರ ಬಳಿ ಹೋಗಿ ಪರೀಕ್ಷಿಸೋಣ" ಎಂದು ಹೇಳಿದರು.

ಆಗ ಮಳೆಗಾಲವಿತ್ತು. ಮರುದಿನ ಸೂರ್ಯನು ಉದಯಿಸುತ್ತಿದ್ದಂತೆಯೇ ಶ್ರೀಕೃಷ್ಣ ಮತ್ತು ಅರ್ಜುನರು ಧರ್ಮರಾಜರ ಬಳಿಗೆ ಹೋದರು. ಅವರನ್ನು ನೋಡಿ ಧರ್ಮರಾಜನಿಗೆ ತುಂಬಾ ಆನಂದವಾಯಿತು. ಅವರನ್ನು ಆದರದಿಂದ ಸತ್ಕರಿಸಿದನು ಮತ್ತು ಅಲ್ಲಿಗೆ ಆಗಮಿಸಿದ ಕಾರಣವನ್ನು ಕೇಳಿದನು. ಆಗ ಶ್ರೀಕೃಷ್ಣನು ಹೇಳಿದನು, "ರಾಜ್ಯದಲ್ಲಿ ತಕ್ಷಣ ಒಂದು ಬೃಹತ್ ನಿರ್ಮಾಣ ಕಾರ್ಯ ಮಾಡಬೇಕಿದೆ. ಅದಕ್ಕಾಗಿ ಕಟ್ಟಿಗೆ ಬೇಕಾಗಿದೆ". ತಕ್ಷಣ ಧರ್ಮರಾಯನು ತನ್ನ ಸೇವಕರನ್ನು ಕರೆದನು ಮತ್ತು ನಿರ್ಮಾಣಕ್ಕಾಗಿ ಅತ್ಯಂತ ಒಳ್ಳೆಯ ಗುಣಮಟ್ಟದ ಕಟ್ಟಿಗೆಯನ್ನು ತನ್ನಿರಿ ಎಂದು ಆಜ್ಞಾಪಿಸಿದನು. ತುಂಬಾ ಹೊತ್ತಾದರೂ ಸೇವಕರು ಹಿಂತಿರುಗಲಿಲ್ಲ. ಸ್ವಲ್ಪ ಸಮಯದ ನಂತರ ಸೇವಕರು ತಲೆಯನ್ನು ಬಗ್ಗಿಸಿ ಖಾಲಿ ಕೈಯಲ್ಲಿ ಹಿಂತಿರುಗಿದರು. ಆಗ ಧರ್ಮರಾಜನು ಕೇಳಿದನು, "ಏನಾಯಿತು? ಕಟ್ಟಿಗೆಯು ಸಿಗಲಿಲ್ಲವೇ?". ಸೇವಕರು ಹೇಳಿದರು, "ಮಳೆಯ ಕಾರಣದಿಂದಾಗಿ ಎಲ್ಲಾ ಕಟ್ಟಿಗೆಗಳು ಒದ್ದೆಯಾಗಿ ಬಿಟ್ಟಿದೆ. ಹಾಗಾಗಿ ನಾವು ಕಟ್ಟಿಗೆಯನ್ನು ತರಲಿಲ್ಲ". ಧರ್ಮರಾಯನು ವಿಧಿ ಇಲ್ಲದೇ ಅರ್ಜುನ ಮತ್ತು ಕೃಷ್ಣನಿಗೆ ಕಟ್ಟಿಗೆ ಸಿಗಲಿಲ್ಲ ಎಂದು ತಿಳಿಸಿದನು.

ಅರ್ಜುನ ಮತ್ತು ಕೃಷ್ಣ ಹಿಂತಿರುಗಿದರು. ನಂತರ ಅವರು ಕರ್ಣನ ಬಳಿ ಹೋದರು. ಕರ್ಣನು ಅವರಿಗೆ ಆದರದಿಂದ ಕೂರಲು ಹೇಳಿದನು ಮತ್ತು ಅವರ ಕ್ಷೇಮ ಸಮಾಚಾರ ವಿಚಾರಿಸಿಕೊಂಡನು. ಆಗ ಅರ್ಜುನನು ಕಟ್ಟಿಗೆಯ ಕುರಿತು ಹೇಳಿದನು. ಆಗ ಕರ್ಣನು, "ಇಷ್ಟೇ ತಾನೇ? ಇದರಲ್ಲಿ ಇಷ್ಟು ಚಿಂತೆ ಮಾಡಲು ಏನಿದೆ?" ಎಂದು ಹೇಳುತ್ತಾ ತನ್ನ ಸೇವಕರನ್ನು ಕಟ್ಟಿಗೆ ತರಲು ಕಳಿಸಿದನು. ಸ್ವಲ್ಪ ಸಮಯದಲ್ಲಿ ಸೇವಕರು ಹಿಂತಿರುಗಿದರು ಮತ್ತು ಹೇಳಿದರು, "ಮಳೆಯಲ್ಲಿ ಎಲ್ಲಾ ಕಟ್ಟಿಗೆಯು ಒದ್ದೆಯಾದ ಕಾರಣ ಯಾವುದೇ ಕಟ್ಟಿಗೆ ಸಿಗಲಿಲ್ಲ". ಇದನ್ನು ಕೇಳಿದ ಕರ್ಣನು ಅರಮನೆಯ ಒಳಗೆ ಹೋದನು ಮತ್ತು ಎಷ್ಟು ಹೊತ್ತಾದರೂ ಹೊರಗೆ ಬರದಿದ್ದಾಗ ಶ್ರೀಕೃಷ್ಣನು ಅರ್ಜುನನನ್ನು ಕರೆದುಕೊಂಡು ಒಳಗೆ ಹೋದನು. ಅಲ್ಲಿ ನೋಡಿದರೆ ಕರ್ಣನು ತನ್ನ ಮಂಚದ ಮರವನ್ನು ಕಡಿಯುತ್ತಿದ್ದನು. ಅಕ್ಕಪಕ್ಕದಲ್ಲಿ ಅನೇಕ ಮರದ ಸಾಮಾನು ಮುರಿದು ಇಡಲಾಗಿತ್ತು. ಆಗ ಅವರಿಗೆ ತಿಳಿಯಿತು ಕರ್ಣ ಇಷ್ಟು ಹೊತ್ತು ಏನು ಮಾಡುತ್ತಿದ್ದನೆಂದು. ಅರ್ಜುನನು ಕೇಳಿದನು, "ಕರ್ಣಾ, ಇಷ್ಟು ಸಣ್ಣ ವಿಷಯಕ್ಕಾಗಿ ನೀನು ಚಂದನದ ಮರದ, ಕರಕುಶಲ ಕೆತ್ತನೆಯನ್ನು ಮಾಡಲಾಗಿರುವ, ಸುಂದರವಾದ ಮಂಚವನ್ನೇಕೆ ಮುರಿದೆ?". ಆಗ ಕರ್ಣನು ಹೇಳಿದನು, " ವಸ್ತುಗಳನ್ನು ಪುನಃ ಮಾಡಿಸಿಕೊಳ್ಳಬಹುದು ಆದರೆ ಯಾರಿಗಾದರು ಸಹಾಯ ಮಾಡುವಂತಹ ಅವಕಾಶವನ್ನು ಕಳೆದುಕೊಂಡರೆ ಅದಕ್ಕಿಂತ ದುಃಖದ ವಿಷಯವೇನಿದೆ?".

ಮಕ್ಕಳೇ, ದಾನವೀರ ಕರ್ಣನ ಕಥೆಯನ್ನು ಓದಿದೆವು. ನಮಗೆ ನಮ್ಮ ಒಂದು ಸಣ್ಣವಸ್ತುವನ್ನೂ ಕೊಡಲು ಇಚ್ಛೆಯಾಗುವುದಿಲ್ಲ. ಆದರೆ ಕರ್ಣನು ವರದಾನವಾಗಿ ಸಿಕ್ಕಿದ ಕವಚ ಕುಂಡಲವನ್ನೂ ಸಹ ದಾನ ನೀಡಿದನು. ನಮಗೂ ಸಹ ನಮ್ಮ ವಸ್ತುಗಳ ತ್ಯಾಗ ಮಾಡಲು ಬರಬೇಕು.


Leave a Comment