ಪ್ರೀತಿಪಾತ್ರನಾದ ಶಿಷ್ಯ – ಕಲ್ಯಾಣ

ಸಮರ್ಥ ರಾಮದಾಸ ಸ್ವಾಮಿಗಳು ತಮ್ಮ ಶಿಷ್ಯಂದಿರೊಂದಿಗೆ ಸಜ್ಜನಗಡ ಕೋಟೆ(ಮಹಾರಾಷ್ಟ್ರ ರಾಜ್ಯದ ಒಂದು ಕೋಟೆ)ಯಲ್ಲಿ ವಾಸವಾಗಿದ್ದರು. ಕೋಟೆಯಲ್ಲಿ ನೀರು ಸರಬರಾಜಿನ ವ್ಯವಸ್ಥೆ ಇರಲಿಲ್ಲ. ಆದ್ದರಿಂದ ಕಲ್ಯಾಣ ಎಂಬ ಒಬ್ಬ ಶಿಷ್ಯನು ಸತ್ಸೇವೆ ಎಂದು ಕೋಟೆಯ ಕೆಳಗೆ ಇದ್ದ ಹಳ್ಳಿಯಿಂದ ನೀರನ್ನು ಕೊಡದಲ್ಲಿ ತುಂಬಿಕೊಂಡು ತರುತ್ತಿದ್ದನು. ಕಾರ್ಯವು ಅವನ ದಿನದ ಬಹಳಷ್ಟು ಸಮಯವನ್ನು ತೆಗೆದುಕೊಳ್ಳುತ್ತಿತ್ತು ಮತ್ತು ಅವನಿಗೆ ಆಧ್ಯಾತ್ಮಿಕ ವಿಷಯಗಳನ್ನು ಅಧ್ಯಯನ ಮಾಡಲು ಕಡಿಮೆ ಸಮಯ ಸಿಗುತ್ತಿತ್ತು. ಉಳಿದ ಶಿಷ್ಯಂದಿರು ದಿನವಿಡೀ ಪ್ರಶ್ನೋತ್ತರಗಳ ಗೋಷ್ಠಿ ಮತ್ತು ವಿಚಾರ ವಿನಿಮಯಗಳನ್ನು ಮಾಡುತ್ತಾ ರಾಮದಾಸ ಸ್ವಾಮಿಗಳಿಂದ ಧಾರ್ಮಿಕ ಗ್ರಂಥಗಳ ಬಗ್ಗೆ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದರು. ಆದರೂ ಕಲ್ಯಾಣನೇ ಗುರುಗಳಿಗೆ ಪ್ರೀತಿಪಾತ್ರನಾಗಿದ್ದನು. ಶಿಷ್ಯಂದಿರಿಗೆ ಏಕೆ ಹೀಗೆ ಎಂದು ಅರ್ಥವಾಗಿರಲಿಲ್ಲ, ಆದ್ದರಿಂದ ಅವರು ಕಲ್ಯಾಣನ ಮೇಲೆ ಸ್ವಲ್ಪ ಮತ್ಸರ ಪಡುತ್ತಿದ್ದರು. ರಾಮದಾಸ ಸ್ವಾಮಿಗಳಿಗೆ ಅವರ ಭಾವನೆಗಳು ಚೆನ್ನಾಗಿ ತಿಳಿದಿದ್ದವು.

ಒಂದು ದಿನ, ಶಿಷ್ಯಂದಿರಿಗೆ ಮಾರ್ಗದರ್ಶನ ಮಾಡುತ್ತಿದ್ದಾಗ, ರಾಮದಾಸ ಸ್ವಾಮಿಗಳು ಅವರಿಗೆ ಒಂದು ಕ್ಲಿಷ್ಟಕರ ಪ್ರಶ್ನೆಯೊಂದನ್ನು ಕೇಳಿದರು. ಯಾರಿಗೂ ಉತ್ತರ ಹೇಳಲಾಗಲಿಲ್ಲ. ಅದೇ ಸಮಯದಲ್ಲಿ ಕಲ್ಯಾಣನು ಅಲ್ಲಿ ಹಾದು ಹೋಗುತ್ತಿದ್ದನು, ಆಗ ಗುರುಗಳು ಅವನನ್ನು ಕರೆದು ಅದೇ ಪ್ರಶ್ನೆಯನ್ನು ಕೇಳಿದರು. ಎಲ್ಲರೂ ಆಶ್ಚರ್ಯಗೊಳ್ಳುವಂತೆ, ಕಲ್ಯಾಣನಿಗೆ ಸರಿಯಾದ ಉತ್ತರ ಗೊತ್ತಿತ್ತು.

ಉಳಿದ ಶಿಷ್ಯರು ರಾಮದಾಸ ಸ್ವಾಮಿಗಳನ್ನು ಕೇಳಿದರು ಇದು ಹೇಗೆ ಸಾಧ್ಯ? ಕಲ್ಯಾಣನು ಯಾವಾಗಲೋ ಒಂದು ಸಲ ನಮ್ಮೊಂದಿಗೆ ಅಧ್ಯಯನ ಮಾಡುತ್ತಾನೆ. ಅವನು ಹೇಗೆ ಇಂತಹ ಕ್ಲಿಷ್ಟಕರವಾದ ಪ್ರಶ್ನೆಗೆ ಉತ್ತರ ಕೊಟ್ಟನು? ಅದಕ್ಕೆ ರಾಮದಾಸ ಸ್ವಾಮಿಗಳು ಉತ್ತರಿಸಿದರು, ಧಾರ್ಮಿಕ ಗ್ರಂಥಗಳು ಬೋಧಿಸುವುದನ್ನು ಕಾರ್ಯತಃ ಮಾಡುತ್ತಿರುವವನು ಅವನೊಬ್ಬನೇ. ಪ್ರತಿದಿನ ಅವನು ಭಗವಂತನಿಗೋಸ್ಕರವೇ ಮಾಡುತ್ತಿದ್ದೇನೆ ಎಂಬ ಭಾವವನ್ನಿಟ್ಟುಕೊಂಡು ನಿಜವಾದ ಅರ್ಥದಲ್ಲಿ ಸತ್ಸೇವೆಯನ್ನು ಮಾಡುತ್ತಾನೆ. ಧಾರ್ಮಿಕ ಗ್ರಂಥಗಳ ಕುರಿತಾಗಿ ಕೇವಲ ಬೌದ್ಧಿಕ ತಿಳುವಳಿಕೆ ಸಾಕಾಗದು. ಕೂಡಲೇ ಶಿಷ್ಯರು ತಮ್ಮ ತಪ್ಪನ್ನು ಅರ್ಥಮಾಡಿಕೊಂಡರು. ಎಲ್ಲರೂ ತಮ್ಮ ಬೌದ್ಧಿಕ ಪ್ರತಿಭೆಯ ಕುರಿತಾಗಿ ಗರ್ವಪಡುತ್ತಿದ್ದರು, ಆದರೆ ಕಲ್ಯಾಣನಿಗೆ ಭಗವಂತನ ಪ್ರತಿ ತೀವ್ರವಾದ ಪ್ರೀತಿಯಿತ್ತು, ಆದ್ದರಿಂದ ಅವನ ಮುಖಾಂತರ ಭಗವಂತನೇ ಉತ್ತರ ಕೊಟ್ಟನು.

ಕಲ್ಯಾಣನಂತೆ ಭಗವಂತನ ಪ್ರತಿ ತೀವ್ರವಾದ ಪ್ರೀತಿಯನ್ನಿಟ್ಟು ಸೇವೆ ಮಾಡಿದರೆ ಮತ್ತು ಅವನಂತಹ ಚಾರಿತ್ರ್ಯವನ್ನು ಬೆಳೆಸಿಕೊಂಡರೆ ನಾವೂ ಕೂಡ ಉತ್ತಮ ಶಿಷ್ಯರಾಗಬಲ್ಲೆವು. ಇದು ಸಾಧ್ಯವಾಗಬೇಕಾದರೆ, ಧಾರ್ಮಿಕ ಗ್ರಂಥಗಳ ಬೋಧನೆಗಳಾದ ಭಗವಂತನ ನಾಮಜಪ ಮಾಡುವುದು, ಇತರರ ಸೇವೆ ಮಾಡುವುದು ಇತ್ಯಾದಿಗಳನ್ನು ಅಧ್ಯಯನ ಮಾಡುವುದು ಮತ್ತು ಅವುಗಳನ್ನು ಕೃತಿಗೆ ತರುವುದನ್ನು ಮಾಡಬೇಕು.

Leave a Comment