ಜಿಲ್ಲಾಧಿಕಾರಿಗಳ ಕಚೇರಿಯ ಮೂಲಕ ರಾಜ್ಯ ಗೃಹ ಸಚಿವರಿಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಮನವಿ !

ಜಿಲ್ಲಾಧಿಕಾರಿ ಕಚೇರಿಗೆ ಮನವಿ ನೀಡುತ್ತಿರುವ ಹಿಂದು ಜನಜಾಗೃತಿ ಸಮಿತಿಯ
ಶ್ರೀ. ಮೋಹನ್ ಗೌಡ ಮತ್ತು ಇತರ ಹಿಂದೂ ಸಂಘಟನೆಗಳ ಕಾರ್ಯಕರ್ತರು
ಬೆಂಗಳೂರು : ಹಿಂದೂ ಧರ್ಮದ ಪರಂಪರೆಯ ಪ್ರಕಾರ ಹಸುವನ್ನು ಗೋಮಾತೆ ಎಂದು ಪೂಜಿಸಲಾಗುತ್ತದೆ. ಗೋವುಗಳನ್ನು ಧಾರ್ಮಿಕವಾಗಿ ದೇವತೆಯ ಸ್ವರೂಪವೆಂದು ಗೌರವಿಸಲಾಗುತ್ತದೆ. ಭಗವಾನ್ ಶ್ರೀಕೃಷ್ಣನು ಸಹ ಗೋಮಾತೆಯ ರಕ್ಷಣೆಗೆ ಹಾಗೂ ಪಾಲನೆಗೆ ಮಹತ್ವ ನೀಡಿದ್ದಾನೆ. ಇದರ ಜೊತೆಗೆ ಗೋವುಗಳು ಕೃಷಿ ಹಾಗೂ ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಪ್ರಮುಖ ಆಧಾರವಾಗಿವೆ.
ಆದರೆ ಕೆಲವು ಸಂದರ್ಭಗಳಲ್ಲಿ, ವಿಶೇಷವಾಗಿ ರಂಜಾನ್ ಹಬ್ಬಗಳ ಸಮಯದಲ್ಲಿ, ರಾಜ್ಯದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ಗೋಸಾಗಾಟ ಮತ್ತು ಗೋಹತ್ಯೆ ನಡೆಯುತ್ತಿರುವುದಾಗಿ ವರದಿಗಳು ಹಾಗೂ ಸುದ್ದಿಗಳ ಮೂಲಕ ತಿಳಿದುಬರುತ್ತಿದೆ. ಕೆಲವು ಸ್ಥಳಗಳಲ್ಲಿ ರಸ್ತೆ ಬದಿಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿಗಳ ವಧೆ ನಡೆಯುವುದು ಕಂಡುಬಂದಿದ್ದು, ಇದರಿಂದ ಸಾರ್ವಜನಿಕ ಆರೋಗ್ಯ, ಪರಿಸರ ಹಾಗೂ ಕಾನೂನು-ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಈಗಾಗಲೇ ಗೋಹತ್ಯೆಯನ್ನು ತಡೆಯಲು ಕಾನೂನುಗಳನ್ನು ಜಾರಿಗೆ ತಂದಿದೆ. ಆದಾಗ್ಯೂ ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಮೂಲಕ ರಾಜ್ಯ ಗೃಹ ಸಚಿವರಿಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ರಾಜ್ಯ ಸಂಯೋಜಕರಾದ ಶ್ರೀ. ಮೋಹನ್ ಗೌಡ, ಶ್ರೀರಾಮ ಸೇನೆಯ ಶ್ರೀ. ಸುಂದ್ರೇಶ್ ನರ್ಗಲ್, ಹಿಂದೂ ಮುಖಂಡರಾದ ಶ್ರೀ. ಸಂತೋಷ್ ಕರ್ತಾಳ್, ಅಡ್ವೋಕೇಟ್ ಶ್ರೀ. ತ್ಯಾಗರಾಜ್, ಡಾ. ನಾಗೇಂದ್ರಪ್ಪ ಸೇರಿದಂತೆ ಹಲವಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ
ಉಡುಪಿ ಅಪಾರ ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಮನವಿ ನೀಡಲಾಯಿತು
ಸಂಬಂಧಿಸಿದ ಕಾನೂನು ಮತ್ತು ಸಂವಿಧಾನಾತ್ಮಕ ಆಧಾರಗಳು
೧. ಭಾರತೀಯ ಸಂವಿಧಾನದ ನಿರ್ದೇಶಕ ತತ್ವ – Article 48
ಭಾರತೀಯ ಸಂವಿಧಾನದ Article 48 ಪ್ರಕಾರ ರಾಜ್ಯವು ಕೃಷಿ ಮತ್ತು ಪಶುಸಂಗೋಪನೆಯನ್ನು
ಸಂಘಟಿತವಾಗಿ ಅಭಿವೃದ್ಧಿಪಡಿಸಲು ಹಾಗೂ ಗೋವುಗಳು ಮತ್ತು ಇತರ ಹಾಲನ್ನು ನೀಡುವ ಪಶುಗಳ ವಧೆಯನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
೨. ಕರ್ನಾಟಕ ಗೋಹತ್ಯೆ ನಿಷೇಧ ಕಾಯಿದೆ
Karnataka Prevention of Slaughter and Preservation of Cattle Act, 2020 ಜಾರಿಯಲ್ಲಿದ್ದು, ಇದರ ಪ್ರಕಾರ ಗೋವುಗಳ ವಧೆ, ಅಕ್ರಮ ಸಾಗಾಟ ಹಾಗೂ ಗೋಮಾಂಸ ಸಂಬಂಧಿತ ಅನಧಿಕೃತ ಚಟುವಟಿಕೆಗಳು ಶಿಕ್ಷಾರ್ಹ ಅಪರಾಧಗಳಾಗಿವೆ.
೩. ಪ್ರಾಣಿಗಳ ಮೇಲಿನ ಕ್ರೂರತೆ ತಡೆ ಕಾಯಿದೆ
Prevention of Cruelty to Animals Act, 1960 ಇದರ ಪ್ರಕಾರ ಕ್ರೂರತೆ, ಅನಧಿಕೃತ ವಧೆ ಅಥವಾ ಅಮಾನವೀಯ ವರ್ತನೆ ಕಾನೂನುಬದ್ಧವಾಗಿ ಶಿಕ್ಷಾರ್ಹವಾಗಿದೆ.
೪. ಆಹಾರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯ ನಿಯಮಗಳು
Food Safety and Standards Act, 2006 ಪ್ರಕಾರ ಪ್ರಾಣಿಗಳ ವಧೆ ಕೇವಲ ಅನುಮೋದಿತ ಹಾಗೂ ಪರವಾನಗಿ ಪಡೆದ ಕಸಾಯಿಖಾನೆಗಳಲ್ಲಿ ಮಾತ್ರ ನಡೆಯಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಅನಧಿಕೃತವಾಗಿ ಪ್ರಾಣಿಗಳ ವಧೆ ನಡೆಸುವುದು ಕಾನೂನುಬಾಹಿರವಾಗಿದೆ.
೫. ಸರ್ವೋಚ್ಚ ನ್ಯಾಯಾಲಯದ ತೀರ್ಪು
೨೬ ಅಕ್ಟೋಬರ್ ೨೦೦೫ ರಂದು State of Gujarat vs Mirzapur Moti Kureshi Kassab Jamat ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಗೋಹತ್ಯೆ ನಿಷೇಧ ಕಾನೂನುಗಳನ್ನು ಸಂವಿಧಾನಸಮ್ಮತವೆಂದು ಘೋಷಿಸಿ ಮಹತ್ವದ ತೀರ್ಪು ನೀಡಿದೆ.

ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ
ಬೀದರನ ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಮನವಿ ನೀಡಲಾಯಿತು

ಹಳಿಯಾಳದ ತಹಶೀಲ್ದಾರರಿಗೆ ಮನವಿ ನೀಡಲಾಯಿತು
ಸರಕಾರಕ್ಕೆ ಬೇಡಿಕೆಗಳೇನು
ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಸಾಮಾಜಿಕ ಸೌಹಾರ್ದತೆ ಕಾಪಾಡುವ ದೃಷ್ಟಿಯಿಂದ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿನಂತಿಸುತ್ತೇವೆ :
೧. ರಂಜಾನ್ ಹಬ್ಬದ ಸಮಯದಲ್ಲಿ ರಾಜ್ಯದಾದ್ಯಂತ ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ ನಡೆಯದಂತೆ ವಿಶೇಷ ಪೊಲೀಸ್ ನಿಗಾ ವ್ಯವಸ್ಥೆ ರೂಪಿಸಬೇಕು.
೨. ರಾಜ್ಯದ ಪ್ರಮುಖ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಚೆಕ್ ಪೋಸ್ಟ್ಗಳಲ್ಲಿ ಪಶುಸಾಗಾಟದ ವಾಹನಗಳ ಪರಿಶೀಲನೆಯನ್ನು ಕಡ್ಡಾಯವಾಗಿ ಮಾಡಬೇಕು.
೩. ಅಧಿಕೃತ ಪರವಾನಗಿ ಹೊಂದಿರುವ ಕಸಾಯಿಖಾನೆಗಳ ಹೊರತಾಗಿ ಬೇರೆಡೆ ಪ್ರಾಣಿಗಳ ವಧೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಬೇಕು.
೪. ಹಬ್ಬದ ನಿಮಿತ್ತವಾಗಿ ತಾತ್ಕಾಲಿಕ ಕಸಾಯಿಖಾನೆಗಳನ್ನು ನಿರ್ಮಿಸಲು ಯಾವುದೇ ಅನುಮತಿ ನೀಡಬಾರದು.
೫. ಅಕ್ರಮ ಗೋಸಾಗಾಟ ಅಥವಾ ಗೋಹತ್ಯೆ ನಡೆಸುತ್ತಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು.
೬. ಪೊಲೀಸ್ ಇಲಾಖೆ, ಪಶುಸಂಗೋಪನಾ ಇಲಾಖೆ ಹಾಗೂ ಸ್ಥಳೀಯ ಆಡಳಿತವು ಸಮನ್ವಯದಿಂದ ಕಾರ್ಯನಿರ್ವಹಿಸಿ ವಿಶೇಷ ಪರಿಶೀಲನಾ ತಂಡಗಳನ್ನು ರಚಿಸಬೇಕು.
೭. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಕಾನೂನುಬದ್ಧ ನಿಯಮಗಳನ್ನು ಪಾಲಿಸಲು ಸಾರ್ವಜನಿಕರಿಗೆ ಸೂಚನೆ ನೀಡಬೇಕು.
ರಾಜ್ಯದ ಸಾಮಾಜಿಕ ಶಾಂತಿ, ಸಾರ್ವಜನಿಕ ಆರೋಗ್ಯ ಮತ್ತು ಧಾರ್ಮಿಕ ಭಾವನೆಗಳ ಗೌರವವನ್ನು ಕಾಪಾಡುವ ದೃಷ್ಟಿಯಿಂದ ಮೇಲ್ಕಂಡ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸುತ್ತೇವೆ.


