ಮಸೂದೆಗೆ ಅನುಮೋದನೆ ನೀಡಬಾರದೆಂದು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ

ಲಕ್ಷ್ಮೇಶ್ವರ : ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿರುವ “ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ) ವಿಧೇಯಕ, 2025” (LA Bill No. 79 of 2025)ಕ್ಕೆ ರಾಜ್ಯಪಾಲರು ಅನುಮೋದನೆ ನೀಡಬಾರದು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ, ವಿವಿಧ ಹಿಂದೂ ಸಂಘಟನೆಗಳು ಹಾಗೂ ವಕೀಲರೊಂದಿಗೆ ಮಾನ್ಯ ತಹಶೀಲ್ದಾರ್ ರಾದ ಪಿ. ವಾಸುದೇವ ಇವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಈ ಸಂಧರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಸೇರಿದಂತೆ ಈರಣ್ಣ ಪೂಜಾರ, ಫಕ್ಕಿರಯ್ಯ ಮಾದಾಪುರಮಠ,ಅಭಿಷೇಕ ಉಮಚಗಿ, Y F ಪಾಟೀಲ, ಪ್ರವೀಣ ಯರ್ಲಗಟ್ಟಿ, ಬಸವರಾಜ ಮೆಣಸಿನಕಾಯಿ, ಯಲ್ಲಪ್ಪ ಶಿರಬಡಗಿ, ಅರುಣ ಕಳ್ಳಿಹಾಳ,ಶಿವಪ್ಪ ಹುಲಕೋಟಿ,ನಾಗಪ್ಪ ಓಂಕಾರಿ ಮುಂತಾದ ಹಿಂದೂ ಮುಖಂಡರಗಳು ಉಪಸ್ಥಿತರಿದ್ದರು.
ಈ ಮನವಿಯಲ್ಲಿ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ತಡೆ ವಿಧೇಯಕವು ಸ್ಪಷ್ಟತೆಯಿಲ್ಲದ ಹಾಗೂ ಸಂವಿಧಾನಕ್ಕೆ ವಿರುದ್ಧವಾದ ಕಾನೂನಾಗಿದ್ದು, ಜನರ ಮಾತಿನ ಸ್ವಾತಂತ್ರ್ಯ ಮತ್ತು ಧಾರ್ಮಿಕ ಆಚರಣೆಗಳಿಗೆ ದೊಡ್ಡ ಅಪಾಯವಾಗುತ್ತದೆ ಎಂದು ತಿಳಿಸಲಾಗಿದೆ. “ದ್ವೇಷ ಭಾಷಣ” ಮತ್ತು “ದ್ವೇಷ ಅಪರಾಧ”ಗಳಂತಹ ಪದಗಳಿಗೆ ಸರಿಯಾದ ಅರ್ಥ ನೀಡದೆ ಇರುವುದರಿಂದ, ಯಾವುದೇ ಹಿಂಸೆ ಅಥವಾ ತಪ್ಪು ಉದ್ದೇಶವಿಲ್ಲದ ಮಾತುಗಳನ್ನೂ ಅಪರಾಧವೆಂದು ಪರಿಗಣಿಸುವ ಸಾಧ್ಯತೆ ಇದೆ. ಜೊತೆಗೆ, ಆರೋಪಿಗಳೇ ತಮ್ಮ ಮಾತು ಧಾರ್ಮಿಕ ಉದ್ದೇಶದಿಂದ ಅಥವಾ ಸಾರ್ವಜನಿಕ ಹಿತಕ್ಕಾಗಿ ಮಾಡಿದದ್ದು ಎಂದು ಸಾಬೀತುಪಡಿಸಬೇಕೆಂದು ಹೇಳಿರುವುದು ನ್ಯಾಯತತ್ತ್ವಕ್ಕೆ ವಿರುದ್ಧವಾಗಿದೆ. ಇದರಿಂದ ವೇದ–ಶಾಸ್ತ್ರ ಉಲ್ಲೇಖ, ಧರ್ಮಪ್ರಚಾರ, ಧಾರ್ಮಿಕ ಚರ್ಚೆಗಳು ಮತ್ತು ಮತೀಯವಾದದ ಟೀಕೆಗಳಂತಹ ಸಾಮಾನ್ಯ ಧಾರ್ಮಿಕ ಚಟುವಟಿಕೆಗಳೇ ಸಮಸ್ಯೆಗೆ ಒಳಗಾಗುವ ಭೀತಿ ಇದೆ. ಮಾತು ಸಂಬಂಧಿತ ಪ್ರಕರಣಗಳನ್ನು ಸಂಜ್ಞೇಯ ಮತ್ತು ಜಾಮೀನು ರಹಿತವಾಗಿಸಿರುವುದು ತಕ್ಷಣದ ಬಂಧನ, ಸಾಧು–ಸಂತರ, ಸಾಮಾಜಿಕ ಕಾರ್ಯಕರ್ತರು ಹಾಗೂ ಪತ್ರಕರ್ತರ ಕಿರುಕುಳಕ್ಕೆ ಕಾರಣವಾಗಬಹುದು. ಅಲ್ಲದೆ, ನ್ಯಾಯಾಲಯದ ಮೇಲ್ವಿಚಾರಣೆಯಿಲ್ಲದೆ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಿರುವುದು ಮತ್ತು ಈಗಾಗಲೇ ಇರುವ ಕೇಂದ್ರ ಕಾನೂನುಗಳೊಂದಿಗೆ ಈ ವಿಧೇಯಕ ಸಂಘರ್ಷ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಇದು ಸಂವಿಧಾನಾತ್ಮಕವಾಗಿ ಪ್ರಶ್ನೆಗೆ ಒಳಪಡುತ್ತದೆ.
ರಾಜ್ಯಪಾಲರಿಗೆ ಮನವಿ :
ಹಿಂದೂ ಜನಜಾಗೃತಿ ಸಮಿತಿಯು ಮಾನ್ಯ ರಾಜ್ಯಪಾಲರನ್ನು ಸಂವಿಧಾನದ ವಿಧಿ 200ರ ಅಡಿಯಲ್ಲಿ ಈ ವಿಧೇಯಕಕ್ಕೆ ಅನುಮೋದನೆ ನೀಡದೇ ತಡೆಹಿಡಿಯುವಂತೆ ವಿನಮ್ರವಾಗಿ ಮನವಿ ಮಾಡಿದೆ. ಜೊತೆಗೆ, ವಿಧೇಯಕದಲ್ಲಿರುವ ಅಸ್ಪಷ್ಟ ಅಂಶಗಳಿಗೆ ಸ್ಪಷ್ಟ ವ್ಯಾಖ್ಯಾನಗಳನ್ನು ನೀಡುವುದು, ಜನರ ವಾಕ್ ಸ್ವಾತಂತ್ರ್ಯ ಹಾಗೂ ಧಾರ್ಮಿಕ ಸ್ವಾತಂತ್ರ್ಯಕ್ಕೆ ಪೂರ್ಣ ರಕ್ಷಣೆ ಒದಗಿಸುವುದು ಮತ್ತು ನ್ಯಾಯಾಲಯದ ಮೇಲ್ವಿಚಾರಣೆಯೊಂದಿಗೆ ಮರುಪರಿಶೀಲನೆ ನಡೆಸುವ ಉದ್ದೇಶದಿಂದ ಇದನ್ನು ವಿಧಾನಸಭೆಗೆ ಹಿಂದಿರುಗಿಸುವಂತೆ ಕೇಳಲಾಗಿದೆ. ಸಂವಿಧಾನದ ರಕ್ಷಕರಾದ ಮಾನ್ಯ ರಾಜ್ಯಪಾಲರು ಮೂಲಭೂತ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಸಮತೋಲನವನ್ನು ಕಾಪಾಡುವಂತಹ ನ್ಯಾಯಯುತ ನಿರ್ಣಯ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಸಮಿತಿ ವ್ಯಕ್ತಪಡಿಸಿದೆ.


