Menu Close

ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ನಿರ್ದೋಷಿ ಎಂದು ಬಿಡುಗಡೆಗೊಂಡ ಹಿಂದೂ ಧರ್ಮಯೋಧರಿಗೆ ಕೊಲ್ಹಾಪುರದಲ್ಲಿ ಭವ್ಯ ಸನ್ಮಾನ !

‘ಮಾಲೇಗಾಂವ್ ಸ್ಫೋಟ’ವು ‘ಕೇಸರಿ ಭಯೋತ್ಪಾದನೆ’ಯನ್ನು ಸಿದ್ಧಪಡಿಸಲು ಕಾಂಗ್ರೆಸ್ ಮಾಡಿದ ಷಡ್ಯಂತ್ರ! – ಸಮೀರ್ ಕುಲಕರ್ಣಿ ಅವರ ತೀಕ್ಷ್ಣ ವಾಗ್ದಾಳಿ

ಕೊಲ್ಹಾಪುರ – ‘ಮಾಲೇಗಾಂವ್ ಬಾಂಬ್ ಸ್ಫೋಟ’ವು ‘ಕೇಸರಿ ಭಯೋತ್ಪಾದನೆ’ (ಭಗವಾ ಭಯೋತ್ಪಾದನೆ) ಅಸ್ತಿತ್ವದಲ್ಲಿದೆ ಎಂದು ಸಾಬೀತುಪಡಿಸಲು ಅಂದಿನ ಕಾಂಗ್ರೆಸ್ ಸರ್ಕಾರವು ಹೆಣೆದ ದೊಡ್ಡ ಷಡ್ಯಂತ್ರವಾಗಿತ್ತು. ದೇಶದ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ಮಾಡದೆ, ಆಗಿನ ಆಡಳಿತಗಾರರ ತಾಳಕ್ಕೆ ಕುಣಿಯುತ್ತಿದ್ದವು. ಈ ಕಾರಣದಿಂದ, ಮಾಲೇಗಾಂವ್ ಮತ್ತು ನಂತರ ನಡೆದ ಅನೇಕ ಬಾಂಬ್ ಸ್ಫೋಟಗಳ ತನಿಖೆ ನಡೆಸುವ ಬದಲು, ಅಂದಿನ ಕಾಂಗ್ರೆಸ್ ಆಡಳಿತಗಾರರು ಅನಗತ್ಯವಾಗಿ ಹಿಂದೂ ನಿಷ್ಠರನ್ನು ಸಿಲುಕಿಸಿದರು ಎಂದು ಮಾಲೇಗಾಂವ್ ಸ್ಫೋಟ ಪ್ರಕರಣದಿಂದ ನಿರ್ದೋಷಿ ಎಂದು ಮುಕ್ತರಾದ ಶ್ರೀ. ಸಮೀರ್ ಕುಲಕರ್ಣಿ ಅವರು ಸ್ಪಷ್ಟವಾಗಿ ಪ್ರತಿಪಾದಿಸಿದರು.

ಶ್ರೀ . ಸಮೀರ್ ಕುಲಕರ್ಣಿ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕೊಲ್ಹಾಪುರದ ‘ದೇವಲ ಕ್ಲಬ್’ನಲ್ಲಿ ಆಯೋಜಿಸಲಾಗಿದ್ದ ‘ಮಾಲೇಗಾಂವ್ ಸ್ಫೋಟದಲ್ಲಿ ನಿರ್ದೋಷಿಗಳೆಂದು ಸಾಬೀತಾದ ಧರ್ಮಯೋಧರು ಮತ್ತು ಅವರ ವಕೀಲರ ಸನ್ಮಾನ’ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮಕ್ಕೆ 800ಕ್ಕೂ ಹೆಚ್ಚು ಹಿಂದೂಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಧರ್ಮವೀರ ಸಮೀರ್ ಕುಲಕರ್ಣಿ ಮತ್ತು ಮೇಜರ್ ರಮೇಶ್ ಉಪಾಧ್ಯಾಯ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಹಾಗೆಯೇ ಹಿಂದೂ ವಿಧಿಜ್ಞ ಪರಿಷತ್ತಿನ ಅಧ್ಯಕ್ಷ ವಕೀಲ ವೀರೇಂದ್ರ ಇಚಲಕರಂಜಿಕರ್, ವಕೀಲ ಸಮೀರ್ ಪಟವರ್ಧನ್, ವಕೀಲೆ ಪ್ರೀತಿ ಪಾಟೀಲ್ ಮತ್ತು ಹಿಂದೂಪರ ಲೇಖಕ ಶ್ರೀ. ವಿಕ್ರಮ ಭಾವೆ ಅವರಿಗೂ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಸನ್ಮಾನಿತರ ಮೆರವಣಿಗೆಯನ್ನು ವಾಹನದಲ್ಲಿ ಸಂಗೀತ ವಾದ್ಯಗಳೊಂದಿಗೆ ಸಭಾಸ್ಥಳದವರೆಗೆ ಮಾಡಲಾಯಿತು.

ದೊಡ್ಡ ಜನರ ಹೆಸರನ್ನು ಹೇಳಲಿಲ್ಲವೆಂದು ನಮ್ಮ ಬಂಧನ! – ಮೇಜರ್ ರಮೇಶ್ ಉಪಾಧ್ಯಾಯ

ಮೇಜರ್ ರಮೇಶ್ ಉಪಾಧ್ಯಾಯ

ಮಾಲೇಗಾಂವ್ ಸ್ಫೋಟವಾದ ದಿನ ನಾನು ಮುಂಬೈಯಲ್ಲಿದ್ದೆ, ಆದರೂ ನನ್ನನ್ನು ಬಂಧಿಸಿ ಥಳಿಸಲಾಯಿತು. ಪರಮಪೂಜ್ಯ ಸರಸಂಘಚಾಲಕ ಡಾ. ಮೋಹನಜಿ ಭಾಗವತ್, ಶ್ರೀ. ಪ್ರವೀಣ್ ತೊಗಾಡಿಯಾ, ಶ್ರೀ ಶ್ರೀ ರವಿಶಂಕರ್, ಯೋಗಿ ಆದಿತ್ಯನಾಥ್ ಅವರ ಹೆಸರುಗಳನ್ನು ತೆಗೆದುಕೊಳ್ಳಲು ನನ್ನ ಮೇಲೆ ಒತ್ತಡ ಹೇರಲಾಯಿತು; ಆದರೆ ನಾನು ಕೊನೆಯವರೆಗೂ ಅವರ ಹೆಸರನ್ನು ಹೇಳಲಿಲ್ಲ. ಇದರಿಂದ ನಮ್ಮನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಯಿತು. ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನವನ್ನು ಹಾಳುಮಾಡಿದರು. ಕೇವಲ ರಾಜಕೀಯ ಲಾಭಕ್ಕಾಗಿ ನಮ್ಮ ಮೇಲೆ ಅನ್ಯಾಯವಾಯಿತು ಎಂದು ಮಾಲೇಗಾಂವ್ ಬಾಂಬ್ ಸ್ಫೋಟದಿಂದ ನಿರ್ದೋಷಿ ಎಂದು ಮುಕ್ತರಾದ ಮತ್ತು ಭಾರತೀಯ ಸೈನ್ಯದಳದ ಮೇಜರ್ ರಮೇಶ್ ಉಪಾಧ್ಯಾಯ ಅವರು ಕೊಲ್ಹಾಪುರದಲ್ಲಿ ಆಘಾತಕಾರಿ ರಹಸ್ಯವನ್ನು ಹೊರಹಾಕಿದರು.

ಅನ್ಯಾಯವಾದರೂ ಹಿಂದುತ್ವದ ಕಾರ್ಯ ಬಿಡುವುದಿಲ್ಲ ! – ವಿಕ್ರಮ ಭಾವೆ, ಲೇಖಕ

ಶ್ರೀ. ವಿಕ್ರಮ್ ಭಾವೆ

ಡಾ. ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಯಾವುದೇ ಸಂಬಂಧವಿಲ್ಲದಿದ್ದರೂ ನನ್ನನ್ನು ಮತ್ತು ವಕೀಲ ಸಂಜೀವ ಪುನಾಳೇಕರ್ ಅವರನ್ನು ಬಂಧಿಸಲಾಯಿತು. ಹತ್ಯೆಯಾದ 15 ನಿಮಿಷಗಳಲ್ಲೇ ಅಂದಿನ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರು ಈ ಹತ್ಯೆಯನ್ನು ‘ಗೋಡ್ಸೆವಾದಿ’ಗಳು ಮಾಡಿದ್ದಾರೆ ಎಂದು ಘೋಷಿಸಿದ್ದರು. ಇದರಿಂದ ಪ್ರಗತಿಪರರ ಆರೋಪಗಳು ಎಷ್ಟು ಸುಳ್ಳು ಮತ್ತು ಯೋಜಿತವಾಗಿರುತ್ತವೆ ಎಂಬುದು ಸ್ಪಷ್ಟವಾಗುತ್ತದೆ. ದಬ್ಬಾಳಿಕೆಯಿಂದ ನೀವು ನಮಗೆ ಹಿಂಸೆ ನೀಡಬಹುದು; ಆದರೆ ನಾವು ಹಿಂದುತ್ವದ ಕಾರ್ಯವನ್ನು ಬಿಡುವುದಿಲ್ಲ ಎಂದು ‘ಮಾಲೇಗಾಂವ್ ಸ್ಫೋಟದ ಹಿಂದಿನ ಅದೃಶ್ಯ ಕೈ’ ಮತ್ತು ‘ದಾಭೋಲ್ಕರ್ ಹತ್ಯೆ ಮತ್ತು ನಾನು’ ಈ ಪುಸ್ತಕಗಳ ಲೇಖಕ ಶ್ರೀ. ವಿಕ್ರಮ ಭಾವೆ ಅವರು ದೃಢವಾಗಿ ಪ್ರತಿಪಾದಿಸಿದರು.

ಕಾಂಗ್ರೆಸ್ಸಿಗರು, ಸಾಮ್ಯವಾದಿಗಳು ಮತ್ತು ಜಿಹಾದಿಗಳ ಮೂಲಕವೇ ‘ಕೇಸರಿ ಭಯೋತ್ಪಾದನೆ’ಯ ಅಪಪ್ರಚಾರ ! – ಶ್ರೀ. ಸುನೀಲ್ ಘನವಟ್

ಶ್ರೀ. ಸುನೀಲ್ ಘಣವತ್

ಕಾಂಗ್ರೆಸ್‌ನಂತಹ ಜಾತ್ಯತೀತ ಆಡಳಿತಗಾರರು ಸಾಮ್ಯವಾದಿ ಮತ್ತು ಜಿಹಾದಿ ಶಕ್ತಿಗಳೊಂದಿಗೆ ಸೇರಿ ದೇಶದಲ್ಲಿ ‘ಕೇಸರಿ ಭಯೋತ್ಪಾದನೆ’ ಇದೆ ಎಂದು ವ್ಯವಸ್ಥಿತವಾಗಿ ಅಪಪ್ರಚಾರ ಮಾಡಿದರು. ಇದಕ್ಕಾಗಿ ಮಾಲೇಗಾಂವ್ ೨೦೦೮, ಸಮಝೌತಾ ಬಾಂಬ್ ಸ್ಫೋಟ, ಮಡಗಾಂವ್ ಸ್ಫೋಟ ೨೦೦೯, ದಾಭೋಲ್ಕರ್-ಪಾನ್ಸರೆ ಹತ್ಯೆಯಂತಹ ಅನೇಕ ಪ್ರಕರಣಗಳಲ್ಲಿ ನಿರಪರಾಧಿ ಹಿಂದೂನಿಷ್ಠರನ್ನು ಸಿಲುಕಿಸಲಾಯಿತು. ಈ ಷಡ್ಯಂತ್ರಕ್ಕೆ ಬಲಿಯಾದವರ ಬೆನ್ನಿಗೆ ನಿಲ್ಲುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡ ರಾಜ್ಯಗಳ ಸಂಘಟಕ ಶ್ರೀ. ಸುನೀಲ್ ಘನವಟ್ ಅವರು ಪ್ರತಿಪಾದಿಸಿದರು.

ಸಾಮ್ಯವಾದಿಗಳು ಮಾಡಿದ ೧೪ ಸಾವಿರ ಹತ್ಯೆಗಳ ಬಗ್ಗೆ ಯಾರೂ ಏಕೆ ಮಾತನಾಡುವುದಿಲ್ಲ ? – ವಕೀಲ ವೀರೇಂದ್ರ ಇಚಲಕರಂಜಿಕರ್

ವಕೀಲರಾದ ವಿರೇಂದ್ರ ಇಚಲಕರಂಜಿಕರ್

ಈ ಸಂದರ್ಭದಲ್ಲಿ ಹಿಂದೂ ವಿಧಿಜ್ಞ ಪರಿಷತ್ತಿನ ಅಧ್ಯಕ್ಷ ವಕೀಲ ವೀರೇಂದ್ರ ಇಚಲಕರಂಜಿಕರ್ ಅವರು ಮಾತನಾಡುತ್ತಾ, “ದಾಭೋಲ್ಕರ್, ಪಾನ್ಸರೆ, ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಹತ್ಯೆಯಾದ ನಂತರ ಅಳುತ್ತಾರೆ; ಆದರೆ ಸಾಮ್ಯವಾದಿಗಳು ದೇಶದಲ್ಲಿ 14 ಸಾವಿರಕ್ಕೂ ಹೆಚ್ಚು ಹತ್ಯೆಗಳನ್ನು ಮಾಡಿದ್ದಾರೆ, ಇದರ ಬಗ್ಗೆ ಯಾರೂ ಏಕೆ ಮಾತನಾಡುವುದಿಲ್ಲ ? ಮುಂದಿನ ದಿನಗಳಲ್ಲಿ ಅನಗತ್ಯವಾಗಿ ಸಿಲುಕಿಸಲಾದ ಇನ್ನು ಕೆಲವು ಹಿಂದೂ ನಿಷ್ಠರ ಸನ್ಮಾನವೂ ಇದೇ ಸ್ಥಳದಲ್ಲಿ ಮತ್ತು ಇದೇ ವೇದಿಕೆಯ ಮೇಲೆ ನಡೆಯಲಿದೆ. ನಾವು ಸಮಾಜದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ‘ಇಕೋಸಿಸ್ಟಂ’ ವಿರುದ್ಧ ಹೋರಾಡಬೇಕಾಗಿದೆ” ಎಂದರು.

ಸಮಾರಂಭದಲ್ಲಿ, ಶ್ರೀ ಸಮೀರ್ ಕುಲಕರ್ಣಿ ಅವರನ್ನು ಸನ್ಮಾನಿಸಲಾಗುತ್ತಿದೆ (ಬಲಕ್ಕೆ), ಅವರೊಂದಿಗೆ ಎಚ್.ಬಿ.ಪಿ. ವಿಠ್ಠಲತಾತ್ಯ ಪಾಟೀಲ್ (ಎಡಕ್ಕೆ) ಇದ್ದಾರೆ.

ಸಮಾರಂಭದಲ್ಲಿ, ವಕೀಲ ವಿರೇಂದ್ರ ಇಚಲಕರಂಜಿಕರ್ ಅವರನ್ನು ಸನ್ಮಾನಿಸಲಾಗುತ್ತಿದೆ (ಬಲಕ್ಕೆ), ಅವರೊಂದಿಗೆ ಎಚ್.ಬಿ.ಪಿ. ಮಹಾದೇವ್ ಯಾದವ್ ಮಹಾರಾಜ್ (ಎಡಕ್ಕೆ) ಇದ್ದಾರೆ.

ಸಮಾರಂಭದಲ್ಲಿ, ಮೇಜರ್ ರಮೇಶ್ ಉಪಾಧ್ಯಾಯ ಅವರನ್ನು ಸನ್ಮಾನಿಸಲಾಗುತ್ತಿದೆ (ಬಲಕ್ಕೆ), ಅವರೊಂದಿಗೆ ಎಚ್.ಬಿ.ಪಿ. ವಿಠ್ಠಲತಾತ್ಯ ಪಾಟೀಲ್ (ಎಡಕ್ಕೆ) ಇದ್ದಾರೆ.

ಸಮಾರಂಭದಲ್ಲಿ, ಶ್ರೀ ವಿಕ್ರಮ್ ಭಾವೆ ಅವರನ್ನು ಸನ್ಮಾನಿಸಲಾಗುತ್ತಿದೆ (ಬಲಕ್ಕೆ), ಅವರೊಂದಿಗೆ ಎಚ್.ಬಿ.ಪಿ. ಮಹಾದೇವ್ ಯಾದವ್ ಮಹಾರಾಜ್ (ಎಡಕ್ಕೆ) ಇದ್ದಾರೆ.

ಈ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಸದ್ಗುರು ಸ್ವಾತಿ ಖಾಡ್ಯೆ, ಹಿಂದೂ ಏಕತಾ ಜಿಲ್ಲಾಧ್ಯಕ್ಷ ಶ್ರೀ. ದೀಪಕ್ ದೇಸಾಯಿ ಮತ್ತು ನಗರ ಪ್ರಮುಖ ಶ್ರೀ. ಗಜಾನನ ತೋಡಕರ್, ಮಹಾರಾಷ್ಟ್ರ ಮಂದಿರ ಮಹಾಸಂಘದ ಶ್ರೀ. ಅಶೋಕ್ ಗುರವ, ಶಿವಸೇನೆಯ ಉಪಜಿಲ್ಲಾ ಪ್ರಮುಖ ಶ್ರೀ. ಉದಯ ಭೋಸಲೆ ಮತ್ತು ಶ್ರೀ. ಕಿಶೋರ್ ಘಾಟಗೆ, ಉದ್ದವ್ ಬಾಳಾಸಾಹೇಬ್ ಪಕ್ಷದ ಉಪಜಿಲ್ಲಾ ಪ್ರಮುಖ ಶ್ರೀ. ಶಂಭಾಜಿರಾವ್ ಭೋಕರೆ ಮತ್ತು ಕರ್ವೀರ ತಾಲ್ಲೂಕು ಪ್ರಮುಖ ಶ್ರೀ. ರಾಜು ಯಾದವ್, ಸ್ವಾತಂತ್ರ್ಯವೀರ ಸಾವರ್ಕರ್ ಸಾಹಿತ್ಯ ಮತ್ತು ವಿಜ್ಞಾನ ಮಂಡಳದ ಅಧ್ಯಕ್ಷ ಶ್ರೀ. ನಿತಿನ್ ವಾಡೀಕರ್, ಉದ್ಯಮಿ ಶ್ರೀಮತಿ ಮನೀಷಾ ವಾಡೀಕರ್, ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನದ ಜಿಲ್ಲಾ ಕಾರ್ಯವಾಹ ಶ್ರೀ. ಸುರೇಶ್ ಯಾದವ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸುನೀಲ್ ಘನವಟ್ ಅವರು ಮಾಡಿದರು, ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ. ವಿಪುಲ್ ಭೋಪಳೆ ಮತ್ತು ಶ್ರೀ. ಅಮೋಲ್ ಕುಲಕರ್ಣಿ ಅವರು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿಂದುತ್ವನಿಷ್ಠರು.

Related News