
ಮೆಟ್ರೋ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿರುವ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶ್ರೀ. ಮೋಹನ್ ಗೌಡ, ಶ್ರೀರಾಮ ಸೇನೆಯ ಅಧ್ಯಕ್ಷರಾದ ಶ್ರೀ. ಪ್ರಮೋದ್ ಮುತಾಲಿಕ್ ಹಾಗೂ ಹಿಂದೂ ಮುಖಂಡರುಗಳು.
ಬೆಂಗಳೂರು: ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಅಡಿಯಲ್ಲಿ ವಿವಿಧ ಹಿಂದೂ ಸಂಘಟನೆಗಳು ಮತ್ತು ಶಿವಾಜಿನಗರದ ನಿವಾಸಿಗಳು ಇತ್ತೀಚೆಗೆ ನಿರ್ಮಾಣಗೊಂಡಿರುವ ಶಿವಾಜಿನಗರ ಮೆಟ್ರೋ ನಿಲ್ದಾಣವನ್ನು “ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಮೆಟ್ರೋ ನಿಲ್ದಾಣ” ಎಂದು ನಾಮಕರಣ ಮಾಡಬೇಕು, ಯಾವುದೇ ಕಾರಣಕ್ಕೂ “ಸೆಂಟ್ ಮೇರಿ” ಎಂದು ನಾಮಕರಣ ಮಾಡಬಾರದು ಎಂದು ಬೆಂಗಳೂರಿನ ಮೆಟ್ರೋ ರೈಲು ನಿಗಮ (BMRCL) ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಪ್ರಮೊದ್ ಮುತಾಲಿಕ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ ಮೋಹನ ಗೌಡ, ಶಿವಾಜಿ ನಗರದ ಆಂಜನೇಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಶ್ರೀ.ಪ್ರದೀಪ ಕುಮಾರ, ವೀರ ಶಿವಾಜಿ ಸೇನೆಯ ಶ್ರೀ. ಕಮಲೇಶ ರಾವ್, ಶಿವ ಘರ್ಜನ ಸೇನೆಯ ಶ್ರೀ.ದೀಪಕ್ ಚೌವಾನ್, ಶ್ರೀರಾಮ ಸೇನೆಯ ಶ್ರೀ. ಸುಂದ್ರೇಶ್ ನರ್ಗಲ್ ಮತ್ತು ಶ್ರೀ. ಮಂಜುನಾಥ, ದುರ್ಗ ಸೇನೆಯ ಸೌ. ಸರಸ್ವತಿ ಪ್ರವೀಣ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಮನವಿಯಲ್ಲಿ ಒತ್ತಿ ಹೇಳಲಾದ ಅಂಶಗಳು:
೧. ಐತಿಹಾಸಿಕ ಹಿನ್ನೆಲೆ – ಕ್ರಿ.ಶ. ೧೬೩೦ರಿಂದ ೧೬೪೦ರವರೆಗೆ ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಬಾಲ್ಯದ ಜೀವನವನ್ನು ತಂದೆ ಶಹಾಜಿ ಮಹಾರಾಜರ ಜೊತೆ ಬೆಂಗಳೂರಿನ ಶಿವಾಜಿನಗರ ಪ್ರದೇಶದಲ್ಲಿ ಕಳೆದಿದ್ದರು. ಆ ಕಾಲದ ಮೈಸೂರು ಆಡಳಿತಗಾರರು ಈ ಪ್ರದೇಶವನ್ನು ಗೌರವ ಸೂಚಕವಾಗಿ “ಶಿವಾಜಿನಗರ” ಎಂದು ಹೆಸರಿಸಿದ್ದರು.
೨. ಸಾಂಸ್ಕೃತಿಕ ಮತ್ತು ಸಾಮಾಜಿಕ ಮಹತ್ವ – ಧೈರ್ಯ, ನ್ಯಾಯ ಹಾಗೂ ಸರ್ವಜನಾಂಗೀಯ ಸಮಾನತೆಯ ಪ್ರತೀಕವಾಗಿದ್ದ ಶಿವಾಜಿ ಮಹಾರಾಜರ ಜೀವನಚರಿತ್ರೆ ಇಂದಿಗೂ ಲಕ್ಷಾಂತರ ಯುವಕರಿಗೆ ಪ್ರೇರಣೆ. ಮೆಟ್ರೋ ನಿಲ್ದಾಣಕ್ಕೆ ಅವರ ಹೆಸರಿಡುವುದರಿಂದ ಭಾರತದ ಪರಂಪರೆಗೂ ಗೌರವ ಸಿಗುತ್ತದೆ.
೩. ಸರ್ವಜನಾಂಗೀಯ ನಾಯಕತ್ವ – ಶಿವಾಜಿ ಮಹಾರಾಜರು ಮರಾಠರ ನಾಯಕರಾಗಿಯೇ ಸೀಮಿತರಾಗದೆ, ಎಲ್ಲ ಧರ್ಮ-ಜಾತಿ ಜನಾಂಗಗಳನ್ನು ಒಗ್ಗೂಡಿಸಿ ಹಿಂದವಿ ಸ್ವರಾಜ್ಯ ಸ್ಥಾಪಿಸಿದರು. ಆದ್ದರಿಂದ ಸಾರ್ವಜನಿಕ ಸಾರಿಗೆ ನಿಲ್ದಾಣಕ್ಕೆ ಅವರ ಹೆಸರು ಅತ್ಯಂತ ಸಮರ್ಪಕ.
ಬೆಂಗಳೂರು : ಇಂದು @HinduJagrutiOrg ಯಿಂದ ಸಮಸ್ತ ಹಿಂದೂ ಸಂಘಟನೆಗಳ ಜೊತೆಗೆ ಶಿವಾಜಿನಗರ ಮೆಟ್ರೋ ನಿಲ್ದಾಣವನ್ನು"ಛತ್ರಪತಿ ಶಿವಾಜಿ ಮಹಾರಾಜ್ ಮೆಟ್ರೋ ನಿಲ್ದಾಣ"ಎಂದು ನಾಮಕರಣ ಮಾಡಬೇಕು, ಯಾವುದೇ ಕಾರಣಕ್ಕೂ “ಸೆಂಟ್ ಮೇರಿ ಮೆಟ್ರೋ ನಿಲ್ದಾಣ” ಎಂದು ಇಡಬಾರದೆಂದು ಆಗ್ರಹಿಸಿ `ನಮ್ಮ ಮೆಟ್ರೋ'ದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು
— HJS Karnataka (@HJSKarnataka) September 21, 2025
ಜನಾಭಿಪ್ರಾಯ – ಶಿವಾಜಿನಗರದಲ್ಲಿ ಕನ್ನಡ ಮತ್ತು ಮರಾಠ ಸಮುದಾಯದ ವಾಸ್ತವ್ಯ ಹೆಚ್ಚು. ಸ್ಥಳೀಯರು ಹಾಗೂ ನಗರದ ಜನರಿಗೆ ಶಿವಾಜಿ ಮಹಾರಾಜರ ಹೆಸರಿನ ನಿಲ್ದಾಣವು ಹೆಮ್ಮೆಯ ವಿಷಯ. “ಸೆಂಟ್ ಮೇರಿ” ಎಂದು ಹೆಸರು ಇಡುವುದರಿಂದ ಪ್ರಯಾಣಿಕರಿಗೆ ಗೊಂದಲ ಉಂಟಾಗುತ್ತದೆ ಹಾಗೂ ಸ್ಥಳೀಯರ ಭಾವನೆಗೆ ಧಕ್ಕೆ ತರುತ್ತದೆ.
ಆಗ್ರಹ:
ಸರ್ಕಾರವು ಮತಬ್ಯಾಂಕ್ ರಾಜಕೀಯಕ್ಕಾಗಿ ಇತಿಹಾಸವನ್ನು ವಿಕೃತಿಕರಣ ಮಾಡದೇ, ಸಾರ್ವಜನಿಕರ ಮನೋಭಾವನೆ ಹಾಗೂ ಶಿವಾಜಿ ಮಹಾರಾಜರ ಗೌರವವನ್ನು ಕಾಪಾಡಲು, ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ “ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಮೆಟ್ರೋ ನಿಲ್ದಾಣ” ಎಂದು ನಾಮಕರಣ ಮಾಡುವಂತೆ ಸಮಿತಿಯು ಬಲವಾಗಿ ಆಗ್ರಹ ಮಾಡಲಾಯಿತು.


