Menu Close

ಭಾರತ ‘ಹಿಂದೂ ರಾಷ್ಟ್ರ’ವೆಂದು ಘೋಷಿಸಲು ಪ್ರಯಾಗರಾಜ ಮಹಾಕುಂಭಮೇಳದಲ್ಲಿ, ಸಂತರು ಮತ್ತು ಮಹಂತರಿಂದ ಒಕ್ಕೊರಲಿನ ಆಗ್ರಹ !

ಅಖಿಲ ಭಾರತೀಯ ಧರ್ಮಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯಿಂದ ‘ಹಿಂದೂ ರಾಷ್ಟ್ರ ಅಧಿವೇಶನ’ ಸಂಪನ್ನ !

ದೀಪ ಪ್ರಜ್ವಲನೆ ಮಾಡುತ್ತಿರುವ ಸಂತರು ಮತ್ತು ಗಣ್ಯರು

ಪ್ರಯಾಗರಾಜ : ಭಾರತದ ಸಂಸ್ಕೃತಿ, ಪರಂಪರೆ, ಧರ್ಮದ ರಕ್ಷಣೆಗಾಗಿ ಮತ್ತು ಭಾರತದ ಉಜ್ವಲ ಭವಿಷ್ಯಕ್ಕಾಗಿ, ಭಾರತವನ್ನು ಧರ್ಮಾಧಾರಿತ ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂದು ಮಹಾಕುಂಭಮೇಳದಲ್ಲಿ ಆಯೋಜಿಸಲಾಗಿದ್ದ ‘ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಪಾಲ್ಗೊಂಡಿದ್ದ ಸಂತ-ಮಹಂತರು, ಹಿಂದೂ ಸಂಘಟನೆಗಳು ಒಟ್ಟಾಗಿ ಆಗ್ರಹಿಸಿದ್ದಾರೆ. ಅಖಿಲ ಭಾರತೀಯ ಧರ್ಮಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿ ಜಂಟಿ ಆಶ್ರಯದಲ್ಲಿ ಶುಕ್ರವಾರ, 31 ಜನವರಿಯಂದು ಈ ಅಧಿವೇಶನ ಪ್ರಯಾಗರಾಜ್‌ನ ಮೋರಿ-ಸಂಗಮ್ ಲೋವರ್ ಮಾರ್ಗ್ ಚೌರಾಹದಲ್ಲಿ ನಡೆಯಿತು.

ಈ ಅಧಿವೇಶನದಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು, ಬಾಂಗ್ಲಾದೇಶ-ರೋಹಿಂಗ್ಯಾ ನುಸುಳುಕೋರರಿಂದ ಭಾರತದ ಆಂತರಿಕ ಭದ್ರತೆಗೆ ಅಪಾಯ, ಕಾಶಿ-ಮಥುರಾ ಮತ್ತು ಇತರ ದೇವಾಲಯಗಳ ಮುಕ್ತಿಗಾಗಿ ಕಾನೂನು ಹೋರಾಟ, ಹಿಂದೂ ದೇವಾಲಯಗಳ ಸರ್ಕಾರೀಕರಣ, ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಹಿಂದೂಗಳ ಮೇಲಾಗುತ್ತಿರುವ ದಾಳಿ, ಲವ್ ಜಿಹಾದ್, ಮತಾಂತರ, ಭಯೋತ್ಪಾದನೆ, ಗಲಭೆ ಮುಂತಾದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಸಂತರು ಮತ್ತು ಧರ್ಮನಿಷ್ಠ ಹಿಂದೂ ಸಂಘಟನೆಗಳು ಹಿಂದೂ ಸಮಾಜವನ್ನು ಒಟ್ಟುಗೂಡಿಸುವ ಅಗತ್ಯವನ್ನು ಒತ್ತಿಹೇಳಿದರು ಮತ್ತು ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಪ್ರಯತ್ನಗಳನ್ನು ವೇಗಗೊಳಿಸುವ ಅಗತ್ಯವನ್ನು ತಿಳಿಸಿದರು.

ಅಧಿವೇಶನದಲ್ಲಿ ಮಾತನಾಡುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಚಾರುದತ್ತ ಪಿಂಗಳೆ

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಇವರು ಮಾತನಾಡಿ, “ಸಂವಿಧಾನದಿಂದ ‘ಜಾತ್ಯತೀತ’ ಎಂಬ ಪದವನ್ನು ತೆಗೆದುಹಾಕುವ ಮೂಲಕ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು. ಅಲ್ಲದೆ, ಜನಸಂಖ್ಯೆ ನಿಯಂತ್ರಣ, ಮತಾಂತರ ನಿಷೇಧ, ಗೋಹತ್ಯೆ ನಿಷೇಧದಂತಹ ಕಾನೂನುಗಳನ್ನು ಜಾರಿಗೊಳಿಸಬೇಕು. ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ನೀಡಿರುವ ವಿಶೇಷ ಅವಕಾಶಗಳನ್ನು ರದ್ದುಪಡಿಸಬೇಕು. ಇತರ ಧರ್ಮ ಆಧಾರಿತ ದೇಶಗಳಲ್ಲಿ, ಬಹುಸಂಖ್ಯಾತರ ಹಿತಾಸಕ್ತಿಗಳಿಗೆ ಆದ್ಯತೆ ನೀಡಲಾಗುತ್ತದೆ, ಆದರೆ ಭಾರತದಲ್ಲಿ, ಹಿಂದೂಗಳು ಬಹುಸಂಖ್ಯಾತರಾಗಿದ್ದರೂ, ಅವರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಲಾಗಿದೆ. ಹಿಂದೂಗಳಿಗೆ ಅನ್ಯಾಯವಾಗುತ್ತಿದ್ದು ತಾರತಮ್ಯ ಮಾಡಲಾಗುತ್ತಿದೆ. ಆದ್ದರಿಂದ, ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯು ಆವಶ್ಯಕವಾಗಿದೆ. ಹಿಂದೂ ರಾಷ್ಟ್ರದ ಸಿದ್ಧಾಂತವು ‘ವಸುಧೈವ ಕುಟುಂಬಕಮ್’ ಅಂದರೆ ಎಲ್ಲರನ್ನೂ ಒಳಗೊಳ್ಳುತ್ತದೆ, ಇದು ಇಡೀ ಮನುಕುಲದ ಕಲ್ಯಾಣ ಮಾಡುತ್ತದೆ ಎಂದರು.

ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕ ಶ್ರೀ. ಸುನೀಲ್ ಘನವಟ ಇವರು ಮಾತನಾಡಿ, “ಭಾರತದ ಜಾತ್ಯತೀತ ಸರ್ಕಾರಗಳು ಕೇವಲ ಹಿಂದೂ ದೇವಾಲಯಗಳನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಮತ್ತು ಅದರ ಆಸ್ತಿಯನ್ನು ಕಬಳಿಸಲು ಪ್ರಯತ್ನಿಸುತ್ತದೆ, ಆದರೆ ಮಸೀದಿ ಅಥವಾ ಚರ್ಚ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಆದ್ದರಿಂದ, ಎಲ್ಲಾ ಹಿಂದೂಗಳು ಒಗ್ಗೂಡಿ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು. ಆಗ ಮಾತ್ರ ನಮ್ಮ ಸಂಸ್ಕೃತಿ ರಕ್ಷಣೆಯಾಗುತ್ತದೆ. ಅಲ್ಲದೆ, ದೇವಸ್ಥಾನದ ಸಂಪತ್ತನ್ನು ಧಾರ್ಮಿಕ ಉದ್ದೇಶಗಳಿಗೆ ಮಾತ್ರ ಬಳಸಬೇಕು ಎಂದರು.

ಅಧಿವೇಶನದಲ್ಲಿ ಮಾತನಾಡುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಪೂರ್ವೋತ್ತರ ಭಾರತದ ಮಾರ್ಗದರ್ಶಕರಾದ ಸದ್ಗುರು ನಿಲೇಶ ಸಿಂಗಬಾಳ

ಹಿಂದೂ ಜನಜಾಗೃತಿ ಸಮಿತಿಯ ಪೂರ್ವೋತ್ತರ ಭಾರತದ ಮಾರ್ಗದರ್ಶಕರಾದ ಸದ್ಗುರು ನೀಲೇಶ ಸಿಂಗಬಾಳ ಇವರು ಮಾತನಾಡಿ, ನಮ್ಮ ಹಿಂದೂ ಸಮಾಜದ ಮೇಲೆ ಶತಮಾನಗಳಿಂದ ಆಕ್ರಮಣಗಳು ನಡೆಯುತ್ತಿವೆ, ಆದರೆ ಈಗ ಪುನರುಜ್ಜೀವನದ ಸಮಯ ಬಂದಿದೆ. ಕಾಶಿ-ಮಥುರಾ ಮುಕ್ತಿಯ ಬೇಡಿಕೆಯು ವೇಗವನ್ನು ಪಡೆಯುತ್ತಿದೆ. ಸಂಭಾಲ್‌ನಲ್ಲಿ ಧ್ವಂಸಗೊಂಡಿರುವ ಹಿಂದೂ ದೇವಾಲಯಗಳ ಜೀರ್ಣೋದ್ಧಾರಕ್ಕೆ ಬೇಡಿಕೆ ಇದೆ, ಇದು ನ್ಯಾಯಯುತ ಬೇಡಿಕೆಯಾಗಿದೆ. ಈಗ ಹಿಂದೂಗಳು ಲವ್ ಜಿಹಾದ್ ಜೊತೆಗೆ ಲ್ಯಾಂಡ್ ಜಿಹಾದ್ ವಿರುದ್ಧ ಹೋರಾಡಬೇಕಾಗಿದೆ ಎಂದರು.

ಎಡದಿಂದ ಪ.ಪೂ. ಭಾಗೀರಾಥೀ ಮಹಾರಾಜರು, ಪೂ. ಯುವಾಚಾರ್ಯ ಅಭಯದಾಸಜಿ ಮಹಾರಾಜರು, ಪೂ. ರಾಮಜ್ಞಾನಿದಾಸ ಮಹಾರಾಜರು, ಬ್ರಹ್ಮಾಚಾರಿ ಶಂಕರ ಚೈತನ್ಯ ಮಹಾರಾಜರು, ಸದ್ಗುರು ನೀಲೇಶ ಸಿಂಗಬಾಳ ಹಾಗೂ ಸದ್ಗುರು ಡಾ. ಚಾರುದತ್ತ ಪಿಂಗಳೆ

Related News