ಮರಾಠರಲ್ಲಿ ಬಹಳಷ್ಟು ಶೂರ ಹೋರಾಟಗಾರು ಹುಟ್ಟಿ ಕುಲದೀಪಕರಾಗಿದ್ದಾರೆ. ನಮ್ಮಲ್ಲಿ ಬಹಳಷ್ಟು ಜನರಿಗೆ ’ಅಹಿಲ್ಯಾಬಾಯಿ ಹೋಳ್ಕರ್’ರ ಹೆಸರು ನೆನಪಿದೆ. ಅವರ ಸಮಾಜ ಸೇವೆಯಿಂದ ಅವರಿಗೆ ’ಪುಣ್ಯಶ್ಲೋಕ’ ಎಂಬ ಬಿರುದನ್ನು ನೀಡಲಾಗಿದೆ. ಅಹಿಲ್ಯಾಬಾಯಿಯು ಮಹಾರಾಷ್ಟ್ರದ ಮರಾಠವಾಡಾದ ಬೀಡ ಜಿಲ್ಲೆಯ ಚೊಂಡಿ ಎಂಬ ಸ್ಥಳದಲ್ಲಿ ಹುಟ್ಟಿ ಬೆಳೆದರೂ, ತಮ್ಮ ಹೆಚ್ಚಿನ ಸೇವೆಯನ್ನು ಮಧ್ಯಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಿಗೆ ಸಲ್ಲಿಸಿದರು.
ಮಂಕೋಜಿ ಶಿಂದೆ-ಪಾಟೀಲರ ಮಗಳಾದ ಅಹಿಲ್ಯಾಳು ಬಾಲ್ಯದಿಂದಲೇ ಧೈರ್ಯಶಾಲಿಯಾಗಿದ್ದಳು. ಅವಳಲ್ಲಿ ರಾಜನ ಎಲ್ಲ ಗುಣಗಳೂ ಜನ್ಮಸಿದ್ಧವಾಗಿ ಬಂದಿದ್ದವು.ಅವರು ತಮ್ಮ ಮನೆ ಹಾಗೂ ರಾಜ್ಯವನ್ನು ಬಹಳ ಪ್ರೀತಿಯಿಂದ ನೋಡುತ್ತಿದ್ದರು.
ಒಂದು ಬಾರಿ ಹಿರಿಯ ಬಾಜಿರಾವ ಪೇಶ್ವೆಯವರ ಸೈನ್ಯವು ಚೊಂಡಿಯಲ್ಲಿ ತಂಗಿತ್ತು. ಆಗ ಬಾಲಕಿ ಅಹಿಲ್ಯಾಬಾಯಿಯು ತನ್ನ ತಾಯಿಯೊಂದಿಗೆ ಸಿನಾ ನದಿಯ ತೀರದಲ್ಲಿರುವ ದೇವಸ್ಥಾನಕ್ಕೆ ಹೋಗಿದ್ದಳು. ನದಿಯ ತೀರದ ಮರಳಿನಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುವಾಗ ಅವಳು ಒಂದು ಶಿವಲಿಂಗವನ್ನು ಮಾಡಿದಳು. ಒಮ್ಮೆಲೇ ಸೈನ್ಯದಲ್ಲಿರುವ ಒಂದು ಕುದುರೆಯು ದಿಕ್ಕೆಟ್ಟು ಮಕ್ಕಳಿರುವ ದಿಕ್ಕಿನತ್ತ ಓಡಲಾರಂಭಿಸಿತು. ಅಹಿಲ್ಯಾಳ ಸ್ನೇಹಿತರು ಓಡಿಹೋದರು, ಆದರೆ ಅಹಿಲ್ಯಾ ಆ ಶಿವಲಿಂಗವನ್ನು ರಕ್ಷಿಸಲು ಅದನ್ನು ಗಟ್ಟಿಯಾಗಿ ಅಪ್ಪಿಕೊಂಡಳು.
ಬಾಜಿರಾವ ಪೇಶ್ವೆಯು ತಕ್ಷಣ ಅಲ್ಲಿಗೆ ಬಂದು ’ನಿನಗೆ ಆ ಕುದುರೆಯು ನಿನ್ನನ್ನು ತುಳಿಯಬಹುದೆಂಬ ಅರಿವಿತ್ತೆ ? ಎಂದು ಕಠೋರ ಸ್ವರದಲ್ಲಿ ಕೇಳಿದರು. ಆಗ ಅಹಿಲ್ಯಾಬಾಯಿಯು ಅವರ ಕಣ್ಣಲ್ಲಿ ಕಣ್ಣಿಟ್ಟು ಧೈರ್ಯದಿಂದ ’ನಾನು ಶಿವಲಿಂಗವನ್ನು ನಿರ್ಮಿಸಿದ್ದೇನೆ ಹಾಗೂ ನನ್ನ ಹಿರಿಯರು ‘ನಮ್ಮ ನಿರ್ಮಿತಿಯನ್ನು ಪ್ರಾಣ ನೀಡಿಯಾದರೂ ರಕ್ಷಿಸಬೇಕು’ ಎಂದು ಹೇಳಿದ್ದಾರೆ ಹಾಗೂ ಈಗ ನಾನು ಅದನ್ನೇ ಮಾಡಿದ್ದೇನೆ’ ಎಂದರು. ಬಾಜಿರಾವಗೆ ಇಂತಹ ದಿಟ್ಟ ಮಾತುಗಳನ್ನು ಕೇಳಿ ಆನಂದವಾಯಿತು. ಇದರಿಂದ ಬಾಜಿರಾವ ಪೇಶ್ವೆಯವರೊಂದಿಗೆ ಇದ್ದ ಮಾಲಹರ್ರೋ ಹೋಳ್ಕರರು ಎಷ್ಟು ಪ್ರಭಾವಿತರಾದರೆಂದರೆ ಅವರು ಅಹಿಲ್ಯಾಳನ್ನು ತಮ್ಮ ಸೊಸೆಯಾಗಿ ಸ್ವೀಕರಿಸಬೇಕೆಂದು ನಿಶ್ಚಯಿಸಿದರು. ಅಹಿಲ್ಯಾಬಾಯಿಯು ತನ್ನ ಮಾವನವರ ಆಯ್ಕೆಯು ಸರಿಯಾಗಿದೆ ಎಂಬುದನ್ನು ಸಾಬೀತು ಪಡಿಸಿ ಹೋಲ್ಕರ ಕುಟುಂಬಕ್ಕೆ ಕೀರ್ತಿಯನ್ನು ತಂದರು.